
ನವದೆಹಲಿ, ಜುಲೈ 23: ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧ ನಡೆಯಲಿರುವ ನಾಲ್ಕು ದಿನಗಳ ಎರಡು ಪಂದ್ಯಗಳಿಗೆ ಭಾರತ ಎ ತಂಡಕ್ಕಾಗಿ ಯುಜುವೇಂದ್ರ ಚಾಹಲ್ ಅವರನ್ನು ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಯು ಜುಲೈ 23ರ ಮಂಗಳವಾರ ನೇಮಿಸಿದೆ.
ಆಯ್ಕೆ ಸಮಿತಿಯು ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ 16 ಜನರಿರುವ ಭಾರತ ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಐಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ. ಕರುಣ್ ನಾಯರ್ ಮತ್ತು ರಿಷಬ್ ಪಂತ್ ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸೀರೀಸ್ ಗೆ ಆಯ್ಕೆಯಾಗಿದ್ದು, ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸಕ್ಕಾಗಿ ಆರಿಸಲಾಗಿದ್ದ ಭಾರತ 'ಎ' ತಂಡದಂತೆಯೇ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ಪಂದ್ಯಕ್ಕಾಗಿ ಭಾರತದ ಎ ತಂಡವಿರಲಿದೆ.
ನಾಯಕ ಅಯ್ಯರ್ ಅವರನ್ನು ಸೇರಿಸಿ ಚಾಹಲ್, ಅಕ್ಸರ್ ಪಟೇಲ್ ತಂಡದಲ್ಲಿ ಇರಲಿದ್ದಾರೆ. ಆದರೆ ಎರಡನೇ ಪಂದ್ಯಕ್ಕೆ ಅಕ್ಸರ್ ಜಾಗವನ್ನು ಶಹಬಾಜ್ ನದೀಮ್ ತುಂಬಲಿದ್ದಾರೆ. ಜೊತೆಗೆ ವಿಜಯ್ ಶಂಕರ್ ಅವರನ್ನೂ ತಂಡದಿಂದ ಹೊರಗಿಡಲಾಗುತ್ತದೆ.
ಮುಂಬರಲಿರುವ ದಕ್ಷಿಣ ಆಫ್ರಿಕಾ ಎ ಮತ್ತು ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗಳಿಗಳಿಗೂ ಶ್ರೇಯಸ್ ಅವರೇ ಎ ತಂಡವನ್ನು ಮುನ್ನಡೆಸಲಿದ್ದಾರೆ. ನಾಲ್ಕನೇ ತಂಡವಾಗಿರುವ ಭಾರತದ ಬಿ ತಂಡಕ್ಕೆ ಮನೀಶ್ ಪಾಂಡೆ ಮುಂದಾಳತ್ವ ವಹಿಸಲಿದ್ದಾರೆ.