ಲಂಡನ್, ಜೂನ್ 3: ಭಾರತ ತಂಡದಲ್ಲಿರುವ ಈ ಇಬ್ಬರು ಆಟಗಾರರಿಂದ ಪಾಕಿಸ್ತಾನ ತಂಡದ ಗೆಲುವಿನ ಕನಸು ನುಚ್ಚುನೂರಾಗಬಹುದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಎಚ್ಚರಿಸಿದ್ದಾರೆ.
ಇದೇ ಭಾನುವಾರ (ಜೂನ್ 4) ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗಲಿವೆ.[ಭಾರತವನ್ನು ಪಾಕ್ ಮಣಿಸುವುದು ಕಷ್ಟಸಾಧ್ಯ ಎಂದ ಅಫ್ರೀದಿ]

ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವೆಬ್ ಸೈಟ್ ನಲ್ಲಿ ಅಂಕಣವೊಂದನ್ನು ಬರೆದಿರುವ ಅವರು, ಅಲ್ಲಿ ಭಾರತ ತಂಡದ ಇಬ್ಬರು ಆಟಗಾರರ ಬಗ್ಗೆ ಪಾಕಿಸ್ತಾನ ತಂಡವು ಭಾರೀ ಎಚ್ಚರಿಕೆಯಿಂದಿರಬೇಕೆಂದು ಹೇಳಿದ್ದಾರೆ. ಅವರೆಂದರೆ, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ.
ಬ್ಯಾಟ್ಸ್ ಮನ್ ಗಳಲ್ಲಿ ಕೊಹ್ಲಿಯನ್ನು ಬೇಗನೇ ಕಟ್ಟಿಹಾಕಬೇಕೆಂಬುದು ಅವರ ಕಿವಿಮಾತು. ಕೊಹ್ಲಿಯವರನ್ನು ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಲು ಬಿಟ್ಟರೆ ಸಾಕು ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಬಲ್ಲ ಚಾಣಾಕ್ಷತೆ ಆತನಿಂದ ಹೊರಹೊಮ್ಮುತ್ತದೆ. ಹಾಗಾಗಿ, ಈತನ ಬಗ್ಗೆ ಎಚ್ಚರದಿಂದಿರಬೇಕೆಂದು ಅಫ್ರಿದಿ ಸಲಹೆ ನೀಡಿದ್ದಾರೆ.
ಇನ್ನು, ಎರಡನೆಯದ್ದಾಗಿ, ಜಸ್ಪ್ರೀತ್ ಬುಮ್ರಾ ಅವರು, ಪಾಕಿಸ್ತಾನ ತಂಡಕ್ಕೆ ಮಾತ್ರ ಗೊತ್ತಿರುವ ಪಾಕಿಸ್ತಾನಿ ಯಾರ್ಕರ್ ಮಾದರಿಯಲ್ಲೇ ಚೆಂಡು ಎಸೆಯಬಲ್ಲ ಏಕೈಕ ಪಾಕಿಸ್ತಾನೇತರ ಬೌಲರ್ ಎಂದರೆ ಅದು ಜಸ್ಪ್ರೀತ್ ಬುಮ್ರಾ ಎಂದು ಹೇಳಿರುವ ಅವರು, ಈತನ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕೆಂದು ಪಾಕಿಸ್ತಾನ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.