
ದೊಡ್ಡ ಮೊತ್ತ ಪೇರಿಸಿ, ಅಷ್ಟಕ್ಕೇ ಸುಮ್ಮನಾದರೆ ಹೇಗೆ?
ಭಾರತ ತಂಡದ ಬ್ಯಾಟಿಂಗ್ ವೇಳೆ ಮಿಂಚಿದ ಆರಂಭಿಕ ಶಿಖರ್ ಧವನ್ ಅವರ 125 ರನ್ ಕಾಣಿಕೆ ಮರೆಯುವಂತಿಲ್ಲ. ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಜತೆಗೆ ಮೊದಲ ವಿಕೆಟ್ ಗೆ 138 ರನ್ ಪೇರಿಸಿದ್ದು ಅವರ ಹೆಗ್ಗಳಿಕೆ. ಇವರ ಶತಕ ಹಾಗೂ ಇತರ ಆಟಗಾರರಾದ ಧೋನಿ (63), ಕೇದಾರ್ ಜಾಧವ್ (13 ಎಸೆತಗಳಲ್ಲಿ 25 ರನ್) ಸಹಾಯದಿಂದಲೇ ತಂಡದ ಮೊತ್ತ 321ಕ್ಕೆ ಬಂದು ನಿಲ್ಲಲು ಸಾಧ್ಯವಾಯಿತು. ಆದರೆ, ದೊಡ್ಡ ಮೊತ್ತ ಪೇರಿಸಿದ ಕೂಡಲೇ ಭಾರತ ಮೈಮರೆತಿದ್ದು ತಂಡಕ್ಕೆ ಮುಳುವಾಯಿತು. ಬ್ಯಾಟಿಂಗ್ ನಲ್ಲಿ ತೋರಿದ ಕಸುವು ಬೌಲಿಂಗ್ ನಲ್ಲಿ ಕಾಣಲಿಲ್ಲ.

ಒತ್ತಡಗೊಳಗಾದರೇ ಬ್ಲೂ ಬಾಯ್ಸ್?
ಭಾರತ ತಂಡದ ಬೌಲಿಂಗ್ ಬಗ್ಗೆ ಕೆಲವಾರು ನೆಗೆಟಿವ್ ಕಮೆಂಟ್ಸ್ ಗಳಿವೆ. ಬ್ಯಾಟಿಂಗ್ ಲೈನಪ್ ನಲ್ಲಿರುವಷ್ಟು ಸದೃಢತೆ ಬೌಲಿಂಗ್ ವಿಭಾಗದಲ್ಲಿಲ್ಲ ಎಂಬ ಟೀಕೆಗಳೂ ಇವೆ. ಆದರೆ, ಯುವ ಬೌಲರ್ ಗಳು ಮನಸ್ಸು ಮಾಡಿದ್ದರೆ ಶ್ರೀಲಂಕಾವನ್ನು ಧೂಳಿಪಟ ಮಾಡಲಾಗದಿದ್ದರೂ, ಕನಿಷ್ಠ 300 ರನ್ ಗಳ ಆಜುಬಾಜುವಿನಲ್ಲಿ ಅದನ್ನು ಕಟ್ಟಿಹಾಕಬಹುದಿತ್ತು. ಆದರೆ, ತಮ್ಮಲ್ಲಿ ಅಂಥ ಸಾಮರ್ಥ್ಯವಿದ್ದರೂ ಬೌಲರ್ ಗಳು ಒತ್ತಡಕ್ಕೊಳಗಾದರು ಎನ್ನಲಡ್ಡಿಯಿಲ್ಲ.

ಅಧಿಕ ರನ್ ಬಿಟ್ಟುಕೊಟ್ಟರು!
ಲಂಕಾ ಮೊತ್ತ ಕೇವಲ 11 ರನ್ ಆಗಿದ್ದಾಗ ಆರಂಭಿಕ ಡಿಕ್ವೆಲ್ಲಾ ಅವರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್ ಗೆ ಅಟ್ಟಿದರು. ಈ ಆರಂಭಿಕ ಯಶಸ್ಸನ್ನು ಭಾರತ ಮುಂದುವರಿಸಿಕೊಂಡು ಹೋಗಲಿಲ್ಲ. ಅದೇ ವಿಪರ್ಯಾಸ. ಇದರ ಜತೆಗೆ ಹಾರ್ದಿಕ್ ಪಾಂಡ್ಯ (7 ಓವರ್ ಗಳಲ್ಲಿ 51 ರನ್), ರವೀಂದ್ರ ಜಡೇಜಾ (6 ಓವರ್ ಗಳಲ್ಲಿ 52 ರನ್), ಉಮೇಶ್ ಯಾದವ್ (9.4 ಓವರ್ ಗಳಲ್ಲಿ 67 ರನ್) ದುಬಾರಿಯಾಗಿ ಪರಿಣಮಿಸಿದ್ದು ಭಾರತಕ್ಕೆ ಹೊರೆಯಾಯಿತು.

ಮೂರನೇ ವಿಕೆಟ್ ಜತೆಯಾಟವನ್ನು ಬೇಗನೇ ಮುರಿಯಬೇಕಿತ್ತು
ಎದುರಾಳಿತಂಡದ ಬ್ಯಾಟ್ಸ್ ಮನ್ ಗಳ ಸುದೀರ್ಘ ಜತೆಯಾಟಗಳು ನಿಜಕ್ಕೂ ಕಂಟಕ. ಇದು ಗೊತ್ತಿದ್ದೂ, ಲಂಕಾದ ಆರಂಭಿಕ ಆಟಗಾರ ಗುಣತಿಲಕ ಹಾಗೂ ಮೂರನೇ ಕ್ರಮಾಂಕದ ಕುಸಲ್ ಮೆಂಡಿಸ್ ಜೋಡಿಯನ್ನು 2ನೇ ವಿಕೆಟ್ ಗೆ 165 ರನ್ ಗಳ ಜತೆಯಾಟ ಪೇರಿಸುವರೆಗೂ ಬಿಟ್ಟಿದ್ದು ದೊಡ್ಡ ತಪ್ಪು. ಲಂಕಾ ಗೆಲುವಿಗೆ ಅಡಿಪಾಯ ಹಾಕಿದ್ದು ಇವರೇ. ಇವರ ಜೋಡಿಯನ್ನು ಬೇಗನೇ ಮುರಿದಿದ್ದರೆ ಭಾರತದ ಗೆಲುವಿನ ಅವಕಾಶಗಳು ಹೆಚ್ಚುತ್ತಿದ್ದವು.

ಮ್ಯಾಥ್ಯೂಸ್, ಪೆರೇರಾರನ್ನು ಬೇಗನೇ ಹೊರಹಾಕಬೇಕಿತ್ತು
ಇನ್ನು, ಮಧ್ಯಮ ಕ್ರಮಾಂಕವನ್ನು ಸಂಪೂರ್ಣವಾಗಿ ಸ್ಥಿರವಾಗಲು ನಿಲ್ಲಲು ಬಿಟ್ಟಿದ್ದು ಎರಡನೇ ತಪ್ಪು. ಲಂಕಾ ತಂಡದ ಮೊತ್ತ 196 ರನ್ ಆಗುವಷ್ಟರಲ್ಲಿ ಅದುವರೆಗೆ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ಗುಣತಿಲಕ ಹಾಗೂ ಮೆಂಡಿಸ್, ಕ್ರೀಸ್ ನಿಂದ ಜಾಗ ಖಾಲಿ ಮಾಡಿದ್ದರು. ಆದರೆ, ಆನಂತರ ಬಂದ ಕುಸಲ್ ಪೆರೇರಾ, ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರನ್ನು ಕ್ರೀಸ್ ನಲ್ಲಿ ನೆಲೆಯೂರಲು ಬಿಟ್ಟಿದ್ದು ಮತ್ತೊಂದು ತಪ್ಪು. ಪೆರೇರಾ 47 ರನ ಗಳಿಸಿದರೆ, ಮ್ಯಾಥ್ಯೂಸ್ ಅರ್ಧಶತಕ ದಾಖಲಿಸಿ, ತಮ್ಮ ಮೇಲ್ಪಂಕ್ತಿಯ ಗುಣತಿಲಕ, ಮೆಂಡಿಸ್ ಹಾಕಿಕೊಟ್ಟಿದ್ದ ಭದ್ರ ಅಡಿಪಾಯದ ಮೇಲೆ ಗೆಲುವಿನ ಸೌಧ ಕಟ್ಟಲು ನಾಂದಿ ಹಾಡಿದರು. ಹಾಗಾಗಿ, ಮಧ್ಯಮ ಕ್ರಮಾಂಕವನ್ನು ಚಿಗುರಲು ಬಿಟ್ಟಿದ್ದು ಭಾರತಕ್ಕೆ ಮುಳುವಾಯಿತು.


Click it and Unblock the Notifications