ಇನ್ನೇನು ಆರು ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿ ಏಳು ವರ್ಷಗಳ ಬಳಿಕ ನಡೆಯುತ್ತಿದೆ. ಈ ಬಾರಿಯ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಆದರೆ ಈ ಟೂರ್ನಿಯ ಪಂದ್ಯಗಳನ್ನು ಆಡಲು, ಭಾರತ ಪಾಕಿಸ್ತಾನಕ್ಕೆ ಹೋಗದ ಕಾರಣ, ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಎಂಟು ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿವೆ. ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಿಗೆ ಪಾಕ್ನ ಮೂರು ಮೈದಾನಗಳು ಸಾಕ್ಷಿಯಾಗಲಿವೆ. ಈ ಟೂರ್ನಿ ಆರಂಭಕ್ಕೂ ಮುನ್ನ ಭಾರತೀಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಐಸಿಸಿ ಈ ಮೆಗಾ ಈವೆಂಟ್ನ ರಾಯಭಾರಿಯನ್ನು ಐಸಿಸಿ ಘೋಷಿಸಿದೆ. ಈ ಜವಾಬ್ದಾರಿಯನ್ನು ಐಸಿಸಿ ಭಾರತದ ಮಾಜಿ ಆಟಗಾರ ಶಿಖರ್ ಧವನ್ ಹೆಗಲಿಗೆ ಹೊರೆಸಿದೆ. ಧವನ್ ಜೊತೆಗೆ ಪಾಕಿಸ್ತಾನದ ಸರ್ಫ್ರಾಜ್ ಅಹ್ಮದ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್ ಮತ್ತು ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರಿಗೂ ಈ ಜವಾಬ್ದಾರಿಯನ್ನು ನೀಡಿದೆ. ಈ ಸ್ಟಾರ್ ಆಟಗಾರರು ಪಂದ್ಯಾವಳಿಯಲ್ಲಿ ಉಪಸ್ಥಿತರಿದ್ದು, ಅಂಕಣಗಳನ್ನು ಬರೆಯಲಿದ್ದಾರೆ.

ಇನ್ನು ಐಸಿಸಿ ದೊಡ್ಡ ಜವಾಬ್ದಾರಿಯನ್ನು ನೀಡಿದ ಬಗ್ಗೆ ಶಿಖರ್ ಧವನ್ ಹೇಳಿಕೆ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಭಾಗವಾಗುವುದು ವಿಶೇಷ ಅನುಭವ ಮತ್ತು ರಾಯಭಾರಿಯಾಗಿ ಮುಂಬರುವ ಟೂರ್ನಿಯನ್ನು ನೋಡುವುದು ಹೆಮ್ಮೆಯ ಸಂಗತಿ. ನನಗೆ ಈ ಟೂರ್ನಿಯೊಂದಿಗೆ ವಿಶೇಷ ನೆನಪುಗಳು ಇವೆ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ಶಿಖರ್ ಧವನ್ ಐಸಿಸಿ ಮೆಗಾ ಈವೆಂಟ್ನಲ್ಲಿ ಎರಡು ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಶಿಖರ್ ಭಾರತದ ಪರ ಈ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ವೇಳೆ ಇವರು ಎರಡೂ ವೇಳೆ ಗೋಲ್ಡನ್ ಬ್ಯಾಟ್ ಪಡೆದ ಕೀರ್ತಿಯನ್ನು ಹೊಂದಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ ಆಟಗಾರನಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಏಕೈಕ ಆಟಗಾರ ಎಂಬ ಹಿರಿಮೆ ಇವರದ್ದಾಗಿದೆ.
ಶಿಖರ್ ಧವನ್ ಭಾರತ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಟೂರ್ನಿಯಲ್ಲಿ ಇವರು ಆಡಿದ 5 ಪಂದ್ಯಗಳಲ್ಲಿ 2 ಶತಕ, 1 ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ 363 ರನ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಒಟ್ಟಾರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್ ಧವನ್ ಒಟ್ಟು 701 ರನ್ ಸಿಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ನಡೆದಾಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಕಾದಾಟವನ್ನು ನಡೆಸಿದ್ದವು. ಆಗ ಪಾಕ್ ಭರ್ಜರಿ ಪ್ರದರ್ಶವನ್ನು ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಆಗ ತಂಡದ ನಾಯಕರಾಗಿದ್ದ ಸರ್ಫರಾಜ್ ಅಹ್ಮದ್ ಅವರಿಗೂ ಐಸಿಸಿ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಈ ಮೂಲಕ ಆತಿಥೇಯ ತಂಡದ ಆಟಗಾರನನ್ನು ಸಹ ಗೌರವಿಸಿದೆ.