ಮುಂದಿನ ವರ್ಷ 2025ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಇದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭರ್ಜರಿ ತಯಾರಿ ನಡೆಸುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಮೈದಾನವನ್ನು ಮೇಲ್ದರ್ಜೆಗೆ ಏರಿಸುವುದರಿಂದ ಹಿಡಿದು ತಂಡವನ್ನು ಸಿದ್ಧಪಡಿಸುವವರೆಗೆ ಎಲ್ಲಾ ಕಾರ್ಯಗಳನ್ನು ಕೈಗೊಂಡಿದೆ.
ಮತ್ತೊಂದೆಡೆ ಈ ಟೂರ್ನಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆಯೇ ಅಥವಾ ಇಲ್ಲವೇ ಎಂಬುದು ದೃಢಪಟ್ಟಿಲ್ಲ. ಇದು ಪಾಕಿಸ್ತಾನಕ್ಕೆ ದೊಡ್ಡ ತಲೆ ನೋವಾಗಿದ್ದು, ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡವನ್ನು ಆಹ್ವಾನಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದು ಅನುಮಾನ ಎನ್ನಲಾಗುತ್ತಿದೆ.

ಚಾಂಪಿಯನ್ ಟ್ರೋಫಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಆದರೆ ಭಾರತವನ್ನು ಹೊರತುಪಡಿಸಿ, ಇದುವರೆಗೆ ಯಾವುದೇ ತಂಡವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರದ ಅನುಮತಿಯನ್ನು ಷರತ್ತುಬದ್ಧಗೊಳಿಸಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಮಾಜಿ ಆಟಗಾರರಿಂದ ಹಿಡಿದು ಪಿಸಿಬಿವರೆಗೆ ಎಲ್ಲರೂ ಭಾರತ ತಂಡವನ್ನು ತಮ್ಮ ದೇಶಕ್ಕೆ ಆಹ್ವಾನಿಸಲು ವಿವಿಧ ರೀತಿಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಬಿಸಿಸಿಐ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ. ಪಾಕಿಸ್ತಾನವು ಹೈಬ್ರಿಡ್ ಮಾದರಿಯನ್ನು ಪರಿಗಣಿಸುತ್ತಿಲ್ಲ. ಸಂಪೂರ್ಣವಾಗಿ ಚಾಂಪಿಯನ್ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಮಾತ್ರ ಆಡಲಾಗುವುದು ಎಂದು ಪಿಸಿಬಿ ಕಾಲಕಾಲಕ್ಕೆ ಹೇಳುತ್ತಿದೆ. ಇದಲ್ಲದೇ ಪಾಕಿಸ್ತಾನದ ಮಾಜಿ ಅನುಭವಿ ಆಟಗಾರರು ಕೂಡ ಭಾರತ ಪಾಕಿಸ್ತಾನಕ್ಕೆ ಬರುವುದು ಬಹುತೇಕ ಖಚಿತ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮತ್ತು ನಾಯಕ ಮೊಯಿನ್ ಖಾನ್ ಚಾಂಪಿಯನ್ಸ್ ಟ್ರೋಫಿ 2025 ರ ಬಗ್ಗೆ ಯೂಟ್ಯೂಬ್ ಚಾನೆಲ್ನೊಂದರಲ್ಲಿ ಮಾತನಾಡಿದ್ದರು. ಟೀಮ್ ಇಂಡಿಯಾ ಐಸಿಸಿಯೊಂದಿಗಿನ ತನ್ನ ಬದ್ಧತೆಯನ್ನು ಗೌರವಿಸಬೇಕು. ಟೀಮ್ ಇಂಡಿಯಾ ನಿಯಮವನ್ನು ಉಲ್ಲಂಘಿಸಿದರೆ, ಭವಿಷ್ಯದಲ್ಲಿ ಅದರ ನಿರ್ಧಾರಕ್ಕೆ ಪಾಕಿಸ್ತಾನವೇ ಹೊಣೆಯಾಗಬೇಕು ಎಂದು ಹೇಳಿದ್ದರು.
ಪಾಕಿಸ್ತಾನದ ಮಾಜಿ ಆಟಗಾರರ ಮೊಯಿನ್ ಖಾನ್ ಅವರು ಬಿಸಿಸಿಐಗೆ ಮನವರಿಕೆ ಮಾಡಿಕೊಡುವಂತೆ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯಂತಹ ಅನುಭವಿ ಆಟಗಾರರಿಗೆ ಮನವಿ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಕಪಿಲ್ ದೇವ್, ರಾಹುಲ್ ದ್ರಾವಿಡ್ ಅವರಂತಹ ಭಾರತದ ಮಾಜಿ ಕ್ರಿಕೆಟಿಗರು ರಾಜಕೀಯವನ್ನು ಕ್ರಿಕೆಟ್ನಿಂದ ದೂರವಿಡಲು ತಮ್ಮ ಕ್ರಿಕೆಟ್ ಮಂಡಳಿಗಳಿಗೆ ತಿಳಿಸಬೇಕು. ರಾಜಕೀಯ ವಿಷಯಗಳು ಕ್ರಿಕೆಟ್ ಮೇಲೆ ಪರಿಣಾಮ ಬೀರಬಾರದು. ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಈ ಎರಡು ತಂಡಗಳ ಆಟವನ್ನು ನೋಡಲು ಇಷ್ಟಪಡುತ್ತಾರೆ. ಇದರಿಂದ ಪಾಕಿಸ್ತಾನಕ್ಕೆ ಮಾತ್ರವಲ್ಲ ಇಡೀ ಕ್ರಿಕೆಟ್ಗೆ ಲಾಭವಾಗಲಿದೆ ಎಂದು ನುಡಿದಿದ್ದಾರೆ.
ಇವರಲ್ಲದೆ, ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ - ಬ್ಯಾಟರ್ ರಶೀದ್ ಲತೀಫ್ ಅವರು ಕೂಡ ಭಾರತದ ಮನವೊಲಿಸಲು ಮುಂದಾಗಿದ್ದಾರೆ. ಜಯ್ ಶಾ ಐಸಿಸಿ ಅಧ್ಯಕ್ಷರಾಗುವುದನ್ನು ಪಾಕಿಸ್ತಾನ ವಿರೋಧಿಸದ ಕಾರಣ ಭಾರತ ತಂಡದ ಪಾಕಿಸ್ತಾನ ಪ್ರವಾಸವು ಸುಮಾರು 50 ಪ್ರತಿಶತ ದೃಢವಾಗಿದೆ ಎಂದು ಹೇಳಿದ್ದಾರೆ.