ಸುಮಾರು 28 ವರ್ಷಗಳ ನಂತರ ಪಾಕಿಸ್ತಾನ ತನ್ನ ಮೊದಲ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಕೊನೆಯದಾಗಿ 1996 ರ ವಿಶ್ವಕಪ್ ಅನ್ನು ಆಯೋಜಿಸಿತ್ತು. ಆದರೆ, 8 ತಂಡಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಪಾಕಿಸ್ತಾನ ಸೇರಿದಂತೆ 7 ತಂಡಗಳು ಮಾತ್ರ ಆ ದೇಶದಲ್ಲಿ ಆಡಲಿದ್ದು, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇದರ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಕ್ರಮಣಕಾರಿ ಕ್ರಿಕೆಟ್ ಆಡುವಂತೆ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ತಮ್ಮ ತಂಡಕ್ಕೆ ಸಲಹೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ರಶೀದ್ ಲತೀಫ್ ನೀಡಿದ ಹೇಳಿಕೆ ಪಾಕಿಸ್ತಾನಕ್ಕೆ ಬಲ ತುಂಬಿದಂತಿದೆ. ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಸೋಲಿಸಿತ್ತು. ಹೀಗಾಗಿ ಪಾಕಿಸ್ತಾನ ಹಾಲಿ ಚಾಂಪಿಯನ್ ಆಗಿ ಮೆಗಾ ಟೂರ್ನಿಯಲ್ಲಿ ಆಡಲಿದೆ. ಫೆಬ್ರವರಿ 19 ರಂದು ಕರಾಚಿಯಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಆದರೆ ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ರಶೀದ್ ಲತೀಫ್ ಭಾರತವನ್ನು ಬಲಷ್ಠ ತಂಡ ಎಂದು ಕರೆದಿದ್ದಾರೆ. ಆದರೆ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾವನ್ನು ಪಾಕಿಸ್ತಾನಕ್ಕೆ ಪ್ರಬಲ ಪ್ರತಿಸ್ಪರ್ಧಿ ಎಂದು ಹೆಸರಿಸಿದ್ದಾರೆ. ಭಾರತ ಬಲಿಷ್ಠ ತಂಡ, ಆದರೆ ಈ ನಾಲ್ಕು ತಂಡಗಳು ದೊಡ್ಡ ಸವಾಲನ್ನು ನೀಡಬಲ್ಲವು ಎಂದು ನಂಬಿದ್ದೇನೆ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಆತಿಥೇಯ ಪಾಕಿಸ್ತಾನ ತಂಡವು ತನ್ನ ಸಿದ್ಧತೆಗಳತ್ತ ಗಮನ ಹರಿಸಬೇಕು. ಟೂರ್ನಿಗಾಗಿ ಭಾರತವು ಪಾಕಿಸ್ತಾನಕ್ಕೆ ಬಾರದಿರುವ ಬಗ್ಗೆ ಯೋಚಿಸಬಾರದು. ಕ್ರಿಕೆಟ್ ಹುಚ್ಚು ದೇಶಕ್ಕೆ ಇದು ರೋಚಕ ಸಮಯ. ಈ ಮೆಗಾ ಈವೆಂಟ್ನಲ್ಲಿ ವಿಶ್ವದ ಪ್ರಮುಖ ತಂಡಗಳು ಭಾಗವಹಿಸಲಿವೆ. ಹೀಗಾಗಿ ಪಾಕಿಸ್ತಾನ ಆಕ್ರಮಣಕಾರಿ ಆಟವಾಡಬೇಕು ಎಂದು ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ರಶೀದ್ ಲತೀಫ್ ಪಾಕಿಸ್ತಾನದ ಸ್ಪಿನ್ ಬೌಲಿಂಗ್ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತವರಿನ ಪರಿಸ್ಥಿತಿಯಲ್ಲಿ ಸ್ಪಿನ್ನರ್ಗಳನ್ನು ಮುಂದಿಡುತ್ತದೆ. ತವರಿನ ಪರಿಸ್ಥಿತಿಯಲ್ಲಿ ಆಡುವ ಅವಕಾಶವನ್ನು ನಮ್ಮ ಆಟಗಾರರು ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಮಿಸ್ಟರಿ ಬೌಲರ್ಗಳಾದ ಅಬ್ರಾರ್ ಅಹ್ಮದ್, ಸುಫಿಯಾನ್ ಮುಖೀಮ್ ಮತ್ತು ಫೈಸಲ್ ಅಕ್ರಮ್ ಅವರಂತಹ ಅತ್ಯುತ್ತಮ ಸ್ಪಿನ್ನರ್ಗಳನ್ನು ನಾವು ಹೊಂದಿದ್ದೇವೆ. ಇದಲ್ಲದೇ ಸಲ್ಮಾನ್ ಅಲಿ ಆಗಾ ಪ್ರಮುಖ ಆಟಗಾರ ಎಂದು ಹೊಗಳಿದ್ದಾರೆ.
ತಂಡದ ಎಲ್ಲಾ ಆಟಗಾರರು ಪ್ರತಿಭಾವಂತರಾಗಿದ್ದರೂ, ಸರಿಯಾದ ಸಂಯೋಜನೆಯನ್ನು ಕಂಡುಹಿಡಿಯುವುದು ಒಂದು ಸವಾಲಾಗಿದೆ. ಆಯ್ಕೆದಾರರು ಏನು ಯೋಚಿಸುತ್ತಿದ್ದಾರೆಂದು ನನಗೆ ಖಚಿತವಿಲ್ಲ. ಆದರೆ ಬಹುಶಃ ಅವರು ಫಖರ್ ಜಮಾನ್ ಮತ್ತು ಶಾನ್ ಮಸೂದ್ ಅವರನ್ನು ಆರಂಭಿಕ ಜೋಡಿಯಾಗಿ ಆಯ್ಕೆ ಮಾಡುತ್ತಾರೆ. ಈ ಬಗ್ಗೆ ಕಾದು ನೋಡಬೇಕು ಎಂದು ರಶೀದ್ ಲತೀಫ್ ಹೇಳಿದ್ದಾರೆ.