2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಈ ಬಾರಿ ಪಾಕಿಸ್ತಾನ ಆಯೋಜಿಸುತ್ತಿದ್ದು, 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ 2023ರ ಏಕದಿನ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಭಾಗವಹಿಸಲಿವೆ.
ಇದೇ ವೇಳೆ ಪಾಕಿಸ್ತಾನ ದೇಶಕ್ಕೆ ಪ್ರಯಾಣಿಸುವ ಬಗ್ಗೆ ಭಾರತ ತಂಡದ ನಿಲುವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವ ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಎರಡೂ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಮೇಲೆ ದಶಕದಿಂದ ತೀವ್ರ ಪರಿಣಾಮ ಬೀರಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗಳನ್ನು 2012ರಿಂದ ರದ್ದುಗೊಳಿಸಲಾಗಿದೆ. ಐಸಿಸಿ ವಿಶ್ವಕಪ್ ಮತ್ತು ಏಷ್ಯಾ ಕಪ್ನಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುವ ಎರಡು ಪಂದ್ಯಾವಳಿಗಳಾಗಿವೆ.
ಗಮನಾರ್ಹ ಸಂಗತಿಯೆಂದರೆ, ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಬಿಸಿಸಿಐ ಹಿಂದೇಟು ಹಾಕಿದ್ದರಿಂದಾಗಿ, 2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ಹೈಬ್ರಿಡ್ ಸ್ವರೂಪಕ್ಕೆ ಬದಲಾಯಿಸಲಾಯಿತು ಮತ್ತು ಶ್ರೀಲಂಕಾ ಸಹ-ಆತಿಥ್ಯ ವಹಿಸಿ ಕೆಲವು ಪಂದ್ಯಗಳನ್ನು ಆಯೋಜಿಸಿತು.
ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ವರದಿಗಳ ನಂತರ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ. "ಚಾಂಪಿಯನ್ ಟ್ರೋಫಿಯ ವಿಷಯದಲ್ಲಿ ಭಾರತ ಸರ್ಕಾರ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಭಾರತ ಸರ್ಕಾರ ನಮಗೆ ಅನುಮತಿ ನೀಡಿದಾಗ ಮಾತ್ರ ನಾವು ನಮ್ಮ ತಂಡವನ್ನು ಕಳುಹಿಸುತ್ತೇವೆ. ಹೀಗಾಗಿ ನಾವು ಭಾರತ ಸರ್ಕಾರದ ನಿರ್ಧಾರದಂತೆ ನಡೆಯುತ್ತೇವೆ," ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಇತ್ತೀಚೆಗೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವರದಿಗಳ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಂದ್ಯಗಳಿಗೆ ಲಾಹೋರ್ ಅನ್ನು ಏಕೈಕ ಸ್ಥಳವನ್ನಾಗಿ ನಿಗದಿಪಡಿಸಿದೆ.
ಪ್ರಯಾಣ, ಲಾಜಿಸ್ಟಿಕಲ್ ಮತ್ತು ಭದ್ರತಾ ತೊಂದರೆಗಳನ್ನು ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಮೂರು ಸ್ಥಳಗಳನ್ನು ಅಂತಿಮಗೊಳಿಸಿದೆ.
ಇದಲ್ಲದೆ, ಪಾಕಿಸ್ತಾನಕ್ಕೆ ಭಾರತೀಯ ತಂಡದ ಪ್ರಯಾಣದ ಮುಖ್ಯ ಕಾರ್ಯಸೂಚಿಯೊಂದಿಗೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿಗೆ ಕರಡನ್ನು ಕಳುಹಿಸಿದೆ ಎಂದು ಹೇಳಿಕೆ ನೀಡಿದ್ದು, ಪಂದ್ಯಾವಳಿಯನ್ನು 2025ರ ಫೆಬ್ರವರಿ ಮಧ್ಯ ಮತ್ತು ಮಾರ್ಚ್ನಲ್ಲಿ ನಡೆಸಬಹುದು ಎಂದು ಬಹಿರಂಗಪಡಿಸಿದರು.