ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಮತ್ತೊಂದೆಡೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಬಿಸಿಸಿಐ ನಿರ್ಧಾರವನ್ನು ಎತ್ತಿ ಹಿಡಿದಿದೆ. ಇದಾದ ಬಳಿಕ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೇತೃತ್ವದ ಸಭೆಯಲ್ಲಿ ಬಿಸಿಸಿಐ ನಿರ್ಧಾರಕ್ಕೆ ಮಣಿದು ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಒಪ್ಪಿಕೊಂಡಿದೆ. ಆದರೆ ಪಾಕಿಸ್ತಾನ ಮತ್ತು ಭಾರತ ನಡುವೆ ಚಾಂಪಿಯನ್ಸ್ ಟ್ರೋಫಿ ವಿವಾದ ಮಾತ್ರ ನಿಲ್ಲುತ್ತಿಲ್ಲ.
ಚಾಂಪಿಯನ್ಸ್ ಟ್ರೋಫಿ ವಿವಾದ ನಡುವೆ ಪಾಕಿಸ್ತಾನದಿಂದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಭಾರತಕ್ಕೆ ಬೆದರಿಕೆಯೊಂದು ಬಂದಿದೆ. ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ದಾವೂದ್ ಇಬ್ರಾಹಿಂ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾನೆ. ಅದರಲ್ಲೂ 1993 ರ ಮುಂಬೈ ಸ್ಪೋಟದ ಮಾಸ್ಟರ್ಮೈಂಡ್ ಆಗಿರುವ ದಾವೂದ್ ಇಬ್ರಾಹಿಂ ಭಾರತಕ್ಕೆ ಇನ್ನೂ ಸಿಕ್ಕಿಲ್ಲ.

ಮುಂಬೈ ಬಾಂಬ್ ಸ್ಫೋಟದಲ್ಲಿ 257 ಜನರು ಸಾವನ್ನಪ್ಪಿದರೆ, 1400 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸದ್ಯ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ವಾಸ ಮಾಡುತ್ತಿರುವ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಂದಿಗೂ ಭೂಗತ ಪಾತಕಿ ಹೊರಗೆ ಕಾಣಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿ ವಿವಾದದ ನಡುವೆ ದಾವೂದ್ ಇಬ್ರಾಹಿಂ ಹೆಸರು ಕೇಳಿ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಮಾತನಾಡಿರುವುದು ಆತಂಕ ಮೂಡಿಸಿದೆ. ಯೂಟ್ಯೂಬ್ ನಲ್ಲಿ ಪಾಕಿಸ್ತಾನದ 'ಕ್ಯಾಟ್ ಬಿಹೈಂಡ್' ಕಾರ್ಯಕ್ರಮದ ನಿರೂಪಕ ಡಾ.ನೌಮನ್ ನಿಯಾಜ್ ಅವರೊಂದಿಗೆ ಮಾತನಾಡಿರುವ ರಶೀದ್ ಲತೀಫ್, ದಾವೂದ್ ಇಬ್ರಾಹಿಂ ಹೆಸರು ತೆಗೆದುಕೊಳ್ಳದೆ ಭಾರತಕ್ಕೆ ಎಚ್ಚರಿಕೆ ಕೊಟ್ಟಿದ್ದಾನೆ. 'ನೀವು ಯಾರೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ?. ನಾನು ಕರಾಚಿಯಲ್ಲಿ ನಮ್ಮ ಸಹೋದರನ ಮನೆಯ ಬಳಿ ವಾಸು ಮಾಡುತ್ತಿದ್ದೇವೆ. ಸಹೋದರನ ಮನೆ ಇಲ್ಲಿದೆ ಎಂದು ರಶೀದ್ ಲತೀಫ್ ಹೇಳಿದ್ದಾರೆ. ಇದೇ ನಗರದಲ್ಲಿ ದಾವೂದ್ ಇಬ್ರಾಹಿಂ ಕೂಡ ವಾಸಿಸುತ್ತಿರುವುದಾಗಿ ವರದಿಯಾಗಿದೆ.