
ದೇಶದೆಲ್ಲೆಡೆ ಮಂಗಳವಾರ ರಾತ್ರಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರ ರಹಸ್ಯ ಕುಟುಕು ಕಾರ್ಯಾಚರಣೆಯ ಸುದ್ದಿ ಸದ್ದು ಮಾಡುತ್ತಿದ್ದು, ಭಾರತೀಯ ಕ್ರಿಕೆಟ್ ಮತ್ತು ತಂಡದ ಬಗ್ಗೆ ಅಭಿಮಾನಿಗಳಲ್ಲಿ ಬೇಸರ ಮೂಡಿಸುವ ಸಂಗತಿಗಳು ಹೊರಬಿದ್ದಿವೆ.
ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಮೇಲೆ ಝೀ ನ್ಯೂಸ್ ನಡೆಸಿದ ಸ್ಫೋಟಕ ಕುಟುಕು ಕಾರ್ಯಾಚರಣೆಯಲ್ಲಿ, ಭಾರತೀಯ ಕ್ರಿಕೆಟ್ ತಂಡದಲ್ಲಿ ನಡೆಯುತ್ತಿರುವ ನಕಲಿ ಫಿಟ್ನೆಸ್ ಚುಚ್ಚುಮದ್ದಿನ ಬಳಕೆ, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಜಗಳ ಸೇರಿದಂತೆ ಹಲವಾರು ಆಘಾತಕಾರಿ ವಿಚಾರಗಳನ್ನು ಚೇತನ್ ಶರ್ಮಾ ಬಹಿರಂಗಗೊಳಿಸಿದ್ದಾರೆ.
ಇದೇ ವೇಳೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಿನ ಆಂತರಿಕ ಮನಸ್ತಾಪದ ಬಗ್ಗೆಯೂ ಚೇತನ್ ಶರ್ಮಾ ಆಸಕ್ತಿದಾಯಕ ವಿಚಾರಗಳನ್ನು ಹೊರಹಾಕಿದ್ದಾರೆ.
ಎಂಎಸ್ ಧೋನಿಯಿಂದ ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ಮತ್ತು ರೋಹಿತ್ ಶರ್ಮಾ ಅಭಿಮಾನಿಗಳೆಂದು ವಿಂಗಡಿಸಲಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಮನಸ್ತಾಪ ಬಹಿರಂಗವಾಗಿಲ್ಲವಾದರೂ, ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ವಿವಾದ ಜೀವಂತವಾಗಿರಿಸುವ ಸಣ್ಣ ನಿದರ್ಶನಗಳು ಆಗಾಗ ನಡೆಯುತ್ತಲಿದ್ದವು.

ಝೀ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮಾತನಾಡಿರುವ ಚೇತನ್ ಶರ್ಮಾ, ವಾಸ್ತವವಾಗಿ ರೋಹಿತ್ ಮತ್ತು ಕೊಹ್ಲಿ ನಡುವೆ ಅಹಂಕಾರದ ಸಂಘರ್ಷ ಇದೆ. ಆದರೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಾಲಿವುಡ್ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರನ್ನು ಉದಾಹರಣೆ ನೀಡಿ, ಈ ಹಿರಿಯ ಆಟಗಾರರ ನಡುವೆ ಅಹಂನ ಘರ್ಷಣೆಯ ಹೊರತಾಗಿ ಬೇರೆನಿಲ್ಲ ಎಂದರು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅನೇಕ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ನಿಂದ ಹೊರಗಿದ್ದಾಗ ರೋಹಿತ್ ಬೆಂಬಲಕ್ಕೆ ನಿಂತಿದ್ದರು ಎಂದು ತಿಳಿಸಿರುವ ಚೇತನ್ ಶರ್ಮಾ, ಇಬ್ಬರ ನಡುವಿನ ಮನಸ್ತಾಪದ ವರದಿಗಳು ಮಾಧ್ಯಮಗಳ ಊಹಾಪೋಹಗಳಾಗಿವೆ ಎಂದು ಹೇಳಿದರು.
ಭಾರತ ತಂಡಕ್ಕಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಹಕವು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠನೆಂದು ಪರಿಗಣಿಸ್ಪಲ್ಪಟ್ಟಿದ್ದರೆ, ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟರ್ಗಳಲ್ಲೊಬ್ಬರು ಎಂದು ಕರೆಯಿಸಿಕೊಳ್ಳುತ್ತಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ಡೋಪಿಂಗ್ ಹಗರಣವಿದೆಯೇ?
ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರ ರಹಸ್ಯ ಕುಟುಕು ಕಾರ್ಯಾಚರಣೆಯಲ್ಲಿ, ಭಾರತ ತಂಡದ ಸುಮಾರು ಶೇ.80-85ರಷ್ಟು ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ನಕಲಿ ಫಿಟ್ನೆಸ್ಗೆ ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ಇದು ಎಷ್ಟರಮಟ್ಟಿಗೆ ಇದೆ ಎಂದರೆ, ಕೆಲವು ಪ್ರಭಾವಿ ಆಟಗಾರರು ಕೂಡ ಕ್ರಿಕೆಟ್ ಮಂಡಳಿಯ ಹೊರಗೆ ವೈಯಕ್ತಿಕ ವೈದ್ಯರನ್ನು ಹೊಂದಿದ್ದಾರೆ. ಅವರು ತಂಡದಲ್ಲಿ ಸ್ಥಾನ ಪಡೆಯಲು ನಕಲಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಬಹಿರಂಗಪಡಿಸಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ.