
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಮೇಲೆ ಖಾಸಗಿ ಸುದ್ದಿ ವಾಹಿನಿಯೊಂದು ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಭಾರತ ಕ್ರಿಕೆಟ್ ತಂಡದ ಹಲವು ಆಂತರಿಕ ವಿಚಾರಗಳನ್ನು ಪ್ರಸ್ತಾಪಿಸಿ ವಿಶ್ವಮಟ್ಟದಲ್ಲಿ ಮುಜುಗರ ತಂದಿಟ್ಟಿದ್ದಾರೆ.
ಝೀ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ನಕಲಿ ಫಿಟ್ನೆಸ್ ಚುಚ್ಚುಮದ್ದಿನ ಬಳಕೆ, ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಭಿನ್ನಾಭಿಪ್ರಾಯ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಣಗಳ ವಿಚಾರ, ಆಟಗಾರರನ್ನು ತಂಡದಿಂದ ಕೈಬಿಡುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ವಿವಾದ ಮೇಲೆಳೆದುಕೊಂಡಿದ್ದಾರೆ.
ಶೇ.80ರಿಂದ 85ರಷ್ಟು ಫಿಟ್ ಆಗಿದ್ದರೂ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಭಾರತ ತಂಡದ ಬಹಳಷ್ಟು ಆಟಗಾರರು ನಕಲಿ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
"ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ಭಾರತ ತಂಡದ ಖಾಯಂ ನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದೇ ವೇಳೆ ಹಾಲಿ ನಾಯಕ ರೋಹಿತ್ ಶರ್ಮಾ ಇನ್ಮುಂದೆ ಭಾರತ ಟಿ20 ತಂಡದ ಭಾಗವಾಗಿರುವುದಿಲ್ಲ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭ್ಮನ್ ಗಿಲ್ ಮತ್ತು ಇತರ 15ರಿಂದ 20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ," ಎಂದು ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ತಿಳಿಸಿದ್ದಾರೆ.

ಕೆಲವು ಆಟಗಾರರು ನಕಲಿ ಫಿಟ್ನೆಸ್ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ ಎಂಬ ಚೇತನ್ ಶರ್ಮಾ ಹೇಳಿಕೆಯಿಂದ, ಬಿಸಿಸಿಐ ಕೆಲವು ಪ್ರಭಾವಿ ಆಟಗಾರರಿಗಾಗಿ ಕಣ್ಮುಚ್ಚಿ ಕುಳಿತಿದೆ ಎಂಬುದನ್ನು ತಿಳಿಸುತ್ತದೆ. ಇದೇ ವಿಚಾರವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ಭಿನ್ನಾಭಿಪ್ರಾಯವನ್ನು ಎತ್ತಿತೋರಿಸುತ್ತದೆ.
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಆಟಗಾರರು ಆಯ್ಕೆ ಸಮಿತಿ ಮುಖ್ಯಸ್ಥರ ನಿರ್ಧಾರಗಳನ್ನೇ ಬದಲಾಯಿಸುತ್ತಾರೆ. ತಂಡದಲ್ಲಿ ಯಾರು ಆಡಬೇಕು ಮತ್ತು ಯಾರನ್ನು ಹೊರಹಾಕಬೇಕು ಎಂಬುದರ ಮೇಲೆಯೂ ಪ್ರಭಾವ ಬೀರುತ್ತಾರೆ ಎಂಬುದು ಚೇತನ್ ಶರ್ಮಾ ಅವರ ಹೇಳಿಕೆಯಿಂದ ತಿಳಿದುಕೊಳ್ಳಬಹುದು.
ಬಿಸಿಸಿಐ ಮತ್ತು ಭಾರತ ತಂಡದಲ್ಲಿ ರಾಜಕೀಯ ಮತ್ತು ಪ್ರಭಾವಗಳು ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿವೆ ಎಂಬುದಕ್ಕೆ ಚೇತನ್ ಶರ್ಮಾ ಅವರ ಮಾತುಗಳೇ ಸಾಕ್ಷಿಯಾದಂತಿವೆ.
ಜೀ ನ್ಯೂಸ್ನ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯಲ್ಲಿ ಭಾರತ ತಂಡದ ಕೆಲವು ಆಟಗಾರರ ನಕಲಿ ಚುಚ್ಚುಮದ್ದು ಬಳಕೆಯ ವಿಚಾರ ಬಹಿರಂಗವಾಗಿದ್ದು, ಈ ವಿಷಯದ ಬಗ್ಗೆ ತಿಳಿದಿದ್ದರೂ ಆಯ್ಕೆ ಸಮಿತಿ ಮುಖ್ಯಸ್ಥರು ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಜಗಜ್ಜಾಹೀರಾಗಿದೆ. ವಿಶ್ವ ಕ್ರಿಕೆಟ್ನ ಮುಂದೆ ಭಾರತ ಹಾಗೂ ಬಿಸಿಸಿಐ ತಲೆತಗ್ಗಿಸುವ ಕೆಲಸವಾಗಿದೆ.
ಈವರೆಗೆ ಕ್ರಿಕೆಟ್ ಅನ್ನು ಭಾರತದಲ್ಲಿ ಹಬ್ಬದಂತೆ ಆಚರಿಸುತ್ತಿದ್ದ ಅಭಿಮಾನಿಗಳು ಮತ್ತು ಪ್ರೇಕ್ಷಕರು, ಇನ್ಮುಂದೆ ಯಾವ ರೀತಿ ನೋಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ನಿಜವಾಗಿಯೂ ಭಾರತ ತಂಡದಲ್ಲಿ ಚೇತನ್ ಶರ್ಮಾ ಹೇಳಿದಂತೆ ಅಂಧಾ ದರ್ಬಾರ್ ನಡೆಯುತ್ತಿದೆಯೇ ಎಂಬುದು ಸೂಕ್ತ ತನಿಖೆಯಿಂದ ಮಾತ್ರ ಸಾಧ್ಯ.