ಶ್ರೀಲಂಕಾ ಪ್ರವಾಸ: ಹೊಸ ಜವಾಬ್ಧಾರಿ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?

ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಶಿಖರ್ ಧವನ್ ನೇತೃತ್ವದ ಈ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡಲಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದ ಕೋಚ್ ಹುದ್ದೆಯನ್ನು ಮೊಟ್ಟ ಮೊದಲ ಬಾರಿಗೆ ಅಲಂಕರಿಸಲಿದ್ದಾರೆ. ಇದಕ್ಕೂ ಮುನ್ನ ದ್ರಾವಿಡ್ ಭಾರತ 'ಎ' ಹಾಗೂ ಅಂಡರ್ 19 ತಂಡಗಳಿಗೆ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಶ್ರಿಲಂಕಾಗೆ ಪ್ರವಾಸ ಕೈಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತನಗೆ ಕಲಿಯಲು ಹಾಗೂ ತನ್ನನ್ನು ಉತ್ತಮ ಪಡಿಸಿಕೊಳ್ಳಲು ದೊರೆತ ಅವಕಾಶವಿದು ಎಂದು ಹೇಳಿದ್ದಾರೆ.
"ಇದೊಂದು ಅನುಭವಿ ಹಾಗೂ ಹೊಸ ಆಟಗಾರರ ಅದ್ಭುತವಾದ ಮಿಶ್ರಣವಾದ ತಂಡವಾಗಿದೆ. ಓರ್ವ ಕೋಚ್ ಆಗಿ ಇದು ನಿಜಕ್ಕೂ ಉತ್ಸುಕವಾದ ಕ್ಷಣವಾಗಿದೆ. ಯಾಕೆಂದರೆ ನೀವು ಉತ್ತಮ ವಾತಾವರಣವನ್ನು ಸೃಷ್ಟಿಸಿದರೆ ಪ್ರತಿಯೊಬ್ಬರು ಕೂಡ ತುಂಬಾ ಕಲಿತುಕೊಳ್ಳುತ್ತಾರೆ. ನಾವು ದೊಡ್ಡ ಗುಂಪಾಗಿದ್ದು ಜೊತೆಯಾಗಿರಬೇಕು. ಇಲ್ಲಿ ಕಲಿಯಲು ಹಾಗೂ ಬೆಳೆಯಲು ಸಾಕಷ್ಟು ಉತ್ತಮ ಅವಕಾಶಗಳು ಇರುತ್ತವೆ. ನಾನು ತುಂಬಾ ಉತ್ಸಾಹದಿಂದಿದ್ದೇನೆ" ಎಂದು ದ್ರಾವಿಡ್ ಹೇಳಿದ್ದಾರೆ.
ಬಿಸಿಸಿಐ ಮೊಟ್ಟ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ನಲ್ಲಿ ಒಂದೇ ಸಂದರ್ಭದಲ್ಲಿ ಎರಡು ವಿಭಿನ್ನ ತಂಡಗಳನ್ನು ಬೇರೆ ಬೇರೆ ದೇಶಗಳಿಗೆ ಸರಣಿಯನ್ನಾಡಲು ಕಳುಹಿಸುತ್ತಿದೆ. ಈಗಾಗಲೇ ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂಗ್ಲೆಂಡ್ನಲ್ಲಿದ್ದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ಮಧ್ಯೆ ಶಿಖರ್ ಧವನ್ ನೇತೃತ್ವದ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್ಗಳ ಸರಣಿಯನ್ನಾಡಲಿದೆ.
ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಹಲವು ಯುವ ಆಟಗಾರರು ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್, ಐಪಿಎಲ್ನಲ್ಲಿ ಮಿಂಚಿದ ಚೇತನ್ ಸಕಾರಿಯಾ, ನಿತೀಶ್ ರಾಣಾ, ಋತುರಾಜ್ ಗಾಯಕ್ವಾಡ್, ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿದ್ದಾರೆ. ಶಿಖರ್ ಧವನ್ ನಾಯಕನಾಗಿದ್ದರೆ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications