ನವದೆಹಲಿ, ಮಾರ್ಚ್ 22 : ಕೋಲ್ಕತ್ತಾದಲ್ಲಿ ಮಾರ್ಚ್ 19 ರಂದು ಶನಿವಾರ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಇಂಡೋ-ಪಾಕ್ ವಿಶ್ವ ಟಿ20 ಕ್ರಿಕೆಟ್ ಪಂದ್ಯದ ಮುನ್ನ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಗೀತೆ ಹಾಡಲು ಸಂಭಾವನೆ ಪಡೆದ ವಿಷಯ ತಣ್ಣಗಾದರೂ, ರಾಷ್ಟ್ರಗೀತೆ ತಪ್ಪಾಗಿ ಹಾಡಿದ್ದಾರೆ ಎಂದು ಸೋಮವಾರ (ಮಾರ್ಚ್ 21) ದಂದು ಆರೋಪಿಸಲಾಗಿದೆ.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್
ರಾಷ್ಟ್ರಗೀತೆ ಹಾಡಲು ಅಮಿತಾಬ್ ಅವರು 4 ಕೋಟಿ ರೂಗಳನ್ನು ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ವದಂತಿ ಸ್ಪೋಟಗೊಂಡು ಅವರ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹಬ್ಬಿ ತೀವ್ರ ಆಕ್ರೋಷಗಳು ವ್ಯಕ್ತವಾಗಿತ್ತು. ಆದರೆ, ಇದೆಲ್ಲ ಸುಳ್ಳು ಸುದ್ದಿ ಎಂದು ಸೌರವ್ ಗಂಗೂಲಿ ನೇತೃತ್ವದ ಬೆಂಗಾಲ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಪ್ರಕಟಿಸಿತ್ತು.

ಈ ವಿವಾದ ತಣ್ಣಗಾದ ಬೆನ್ನಲ್ಲೇ ಅಮಿತಾಬ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಬಿಗ್ ಬಿ ಅವರು ರಾಷ್ಟ್ರಗೀತೆಯನ್ನು ಅವರು ನಿಗದಿತ ಸಮಯ 52 ಸೆಕೆಂಡ್ ಗಳಲ್ಲಿ ಹಾಡಿಲ್ಲ ಹಾಗೂ ಗೀತೆಯನ್ನು ಅವರು ತಪ್ಪಾಗಿ ಹಾಡಿದ್ದಾರೆ. 1.22 ನಿಮಿಷ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದಲ್ಲಿ ಅವರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.
ರಾಷ್ಟ್ರಗೀತೆಯನ್ನು 52 ಸೆಕೆಂಡ್ ಗಳಲ್ಲಿ ಮುಗಿಸಬೇಕೆಂಬ ನಿಯಮವಿದೆ. ಆದರೆ, ನಿಗದಿತ ಸಮಯದಲ್ಲಿ ಅಮಿತಾಬ್ ಹಾಡದೆ ನಿಯಮವನ್ನು ಉಲ್ಲಂಘಿಸಿದ್ದಾರೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದರು. ಒಟ್ಟಿನಲ್ಲಿ ಅಮಿತಾಬ್ ಅವರ ವಿರುದ್ಧ ಎದ್ದಿರುವ ಈ ಸುದ್ದಿಗಳನ್ನು ನೋಡಿದರೆ ಯಾಕಪ್ಪಾ ನಾನು ರಾಷ್ಟ್ರಗೀತೆ ಹಾಡಿದ್ದೇನೆಂದು ಬಿಗ್ ಬಿ ಅಂದುಕೊಳ್ಳುವಂತಾಗಿದೆ.