ಜುಲೈ 23 ಮಂಗಳವಾರ, ಟಿ20 ವಿಶ್ವಕಪ್ 2024ರ ಬಳಿಕ ಎಲ್ಲಾ ತಂಡಗಳ ಗಮನವು ಮುಂಬರುವ 2025ರ ಚಾಂಪಿಯನ್ಸ್ ಟ್ರೋಫಿ ಮೇಲಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಈ ಟೂರ್ನಿಯ ಕುರಿತಾಗಿ ಜೋರಾದ ಚರ್ಚೆ ನಡೆಯುತ್ತಿದೆ.
ಇದರ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಭೆಯು ಶ್ರೀಲಂಕಾದಲ್ಲಿ ಜುಲೈ 19 ರಿಂದ 22 ರವರೆಗೆ ನಡೆದಿದ್ದು, ಇದೀಗ ಮುಕ್ತಾಯವಾಗಿದೆ. 2025ರ ಆರಂಭದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ.

ಹೀಗಾಗಿ ಐಸಿಸಿ ವಾರ್ಷಿಕ ಸಭೆಯಲ್ಲಿ ಪಿಸಿಬಿ ತನ್ನ ಪರವಾದ ಕೆಲವೊಂದು ಘೋಷಣೆಯನ್ನು ನಿರೀಕ್ಷಿಸುತ್ತಿತ್ತು. ಆದರೆ ಸಭೆ ಮುಗಿದ ಬಳಿಕ ಪಿಸಿಬಿಯ ನಿರೀಕ್ಷೆ ಹುಸಿಯಾಗಿದೆ.
ಕಳೆದ ವರ್ಷ ಏಷ್ಯಾಕಪ್ನ ಆತಿಥ್ಯವೂ ಪಾಕಿಸ್ತಾನದ ಕೈಯಲ್ಲಿತ್ತು. ಉಭಯ ದೇಶಗಳ ನಡುವಿನ ಸಂಬಂಧ ಹಳಸಿರುವ ಕಾರಣ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸ್ಪಷ್ಟವಾಗಿ ನಿರಾಕರಿಸಿತ್ತು.
ಈ ಬಾರಿ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟಿದೆ. ಆದರೂ ಮತ್ತೊಮ್ಮೆ ಪಾಕಿಸ್ತಾನಕ್ಕೆ ಹೋಗಬೇಕೆಂಬ ಕೂಗು ಕೇಳಿ ಬಂದಿದೆ.
ಇಂತಹ ಪರಿಸ್ಥಿತಿಯಲ್ಲಿ ವಾರ್ಷಿಕ ಸಭೆಯಲ್ಲಿ ಎಲ್ಲಾ ಸದಸ್ಯ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದೊಡ್ಡ ಘೋಷಣೆ ಮಾಡಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಅದು ಆಗಲಿಲ್ಲ.
ಈಗಾಗಲೇ 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಆರಂಭಿಸಿದೆ. ವರದಿಗಳ ಪ್ರಕಾರ, ಪಿಸಿಬಿ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದ್ದು, ಇದರಲ್ಲಿ ಲಾಹೋರ್ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದೆ.
ಆದರೆ ಇದರ ಹೊರತಾಗಿಯೂ ಐಸಿಸಿ ವಾರ್ಷಿಕ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಕುರಿತು ಚರ್ಚೆ ನಡೆದಿಲ್ಲ. ಇದು ಪಾಕಿಸ್ತಾನದ ನಿದ್ದೆಗೆಡಿಸಿದೆ.
ಈ ಬಾರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈಬ್ರಿಡ್ ಮಾದರಿಯ ವಿರುದ್ಧ ಸಂಪೂರ್ಣ ಕಿಡಿಕಾರಿದೆ. ಆದರೆ ಏಪ್ಯಾಕಪ್ ಅಂತೆ ಚಾಂಪಿಯನ್ ಟ್ರೋಫಿಯನ್ನು ಹೈಬ್ರಿಡ್ ಮಾದರಿ ನಡೆಸಲು ಐಸಿಸಿಗೆ ಮನವಿ ಮಾಡಿದೆ. ಇದರಿಂದ ಪಾಕಿಸ್ತಾನ ಭಾರೀ ಉದ್ವಿಗ್ನತೆ ಪರಿಸ್ಥಿತಿಯಲ್ಲಿದೆ.
ಆಟಗಾರರ ಭದ್ರತೆಯ ದೃಷ್ಟಿಯಿಂದ ಬಿಸಿಸಿಐ ಈ ಬಾರಿಯೂ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳದಿದ್ದರೆ, ಆ ಸ್ಥಳದ ಬಗ್ಗೆ ಐಸಿಸಿ ಮಹತ್ವದ ನಿರ್ಧಾರ ಕೈಗೊಳ್ಳಬಹುದು. ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಸಂಕಷ್ಟ ಎದುರಾಗಬಹುದು.
ಪಾಕಿಸ್ತಾನ ಮತ್ತು ಭಾರತ 2012 ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಮುಂಬೈ ದಾಳಿ ನಂತರ ಭಾರತ ಸರ್ಕಾರವು ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯಗಳನ್ನು ಐಸಿಸಿ ಅಥವಾ ಎಸಿಸಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತಗೊಳಿಸಿದೆ.
ಭಾರತ ತಂಡ ಕಳೆದ ವರ್ಷ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಯಿತು.