ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಮುಗಿದು ತಿಂಗಳುಗಳೇ ಕಳೆದಿದೆ. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆದರೂ ಭಾರತಕ್ಕೆ ಇನ್ನು ಟ್ರೋಫಿ ಸಿಕ್ಕಿಲ್ಲ. ಹೀಗಾಗಿ ಇದು ವಿವಾದವನ್ನು ಹುಟ್ಟಿಸಿದೆ. ಈ ವಿವಾದವನ್ನು ಐಸಿಸಿ ಅಂಗಳಕ್ಕೆ ಕೊಂಡೊಯ್ಯಲು ಬಿಸಿಸಿಐ ನಿರ್ಧರಿಸಿತ್ತು. ಈ ಭಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾಡುತ್ತಿದೆಯೋ ಅಥವಾ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಸಮಸ್ಯೆಗಳಿಂದಾಗಿ ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ಖಾನ್ ಐಸಿಸಿ ಸಭೆಯಲ್ಲಿ ಗೈರಾಗುತ್ತಿದ್ದಾರೋ ತಿಳಿದಿಲ್ಲ. ಒಟ್ಟಿನಲ್ಲಿ ಐಸಿಸಿ ಸಭೆಗೆ ಮೊಹ್ಸಿನ್ ಖಾನ್ ಗೈರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ದುಬೈನಲ್ಲಿ ಐಸಿಸಿ ಸಭೆ ಮಂಗಳವಾರದಿಂದ ಆರಂಭವಾಗಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಸಭೆಯಲ್ಲೊ ಮೊಹ್ಸಿನ್ ನಖ್ವಿ ತೀವ್ರ ಮುಖಭಂಗವನ್ನು ಎದುರಿಸಲಿದ್ದಾರೆ. ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಐಸಿಸಿ ಸಭೆಯಲ್ಲಿ ಭಾಗವಹಿಸಿದ್ದೇ ಆದಲ್ಲಿ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸುವ ಅನಿವಾರ್ಯತೆ ಇದೆ. ಹೀಗಾಗಿ ಇವರು ಈ ಸಭೆಯಿಂದ ನುಣುಚಿಕೊಳ್ಳಲು ತಯಾರಿ ನಡೆಸಿದಂತೆ ಕಾಣುತ್ತಿದೆ.

ಮೊಹ್ಸಿನ್ ನಖ್ವಿ ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ನೇಮಕವಾದ ಬಳಿಕ ನಡೆದ ಸಭೆಗಳಲ್ಲಿ ಮೊಹ್ಸಿನ್ ನಖ್ವಿ ಅವರು ಒಂದೂ ಸಭೆಯಲ್ಲಿ ಹಾಜರಾಗಿಲ್ಲ. ಐಸಿಸಿ ಸಭೆಯಲ್ಲಿ ನಖ್ವಿ ಸ್ಥಾನವನ್ನು ಸುಮೈರ್ ಸೈಯದ್ ಬದಲಿಸಬಹುದು ಎಂಬ ಮಾತುಗಳು ಸಹ ಕೇಳಿ ಬಂದಿವೆ. ನಖ್ವಿ ದುಬೈ ತಲುಪಲು ಸಾಧ್ಯವೇ ಆಗದಿದ್ದರೆ, ನ.7 ರಂದು ನಡೆಯುವ ಮಂಡಳಿ ಸಭೆಯಲ್ಲಿ ಭಾಗವಹಿಸಬಹುದು ಎಂಬ ವರದಿಗಳು ಹರಿದಾಡುತ್ತಿವೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಆದರೆ ಭಾರತ ಪ್ರಶಸ್ತಿ ಸಮಾರಂಭವನ್ನು ಬಹಿಷ್ಕರಿಸಿತ್ತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಅವರು ವೇದಿಕೆಯ ಕಾರ್ಯಕ್ರಮದಲ್ಲಿ ಹಾಜರದಿದ್ದರಿಂದ ಭಾರತ, ಈ ಸಮಾರಂಭವನ್ನು ಬಹಿಷ್ಕರಿಸಿತ್ತು. ಇದಾದ ಬಳಿಕ ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ತಮ್ಮೊಂದಿಗೆ ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಿದ್ದರು. ಇದಾದ ಬಳಿಕ ಮೊಹ್ಸಿನ್ ನಖ್ವಿ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ನಖ್ವಿ ಅವರ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಅವರು ಏಷ್ಯಾ ಕಪ್ ಟಿ20 ಟ್ರೋಫಿಯನ್ನು ಪಾಕಿಸ್ತಾನದಿಂದ ದುಬೈಗೆ ತಂದರು. ಆ ಬಳಿಕ ಆ ಟ್ರೋಫಿಯನ್ನು ದುಬೈನ ಎಸಿಸಿ ಕಚೇರಿಯಲ್ಲಿ ಇರಿಸಲಾಗಿತ್ತು. ಆ ಬಳಿಕ ಅದನ್ನು ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ ಎಂಬ ವರದಿಗಳು ಆಗಿದ್ದವು. ಈ ಎಲ್ಲ ಬೆಳವಣಿಗೆಗಳ ಬಳಿಕ ನಖ್ವಿ ಐಸಿಸಿ ಸಭೆಯಲ್ಲಿ ಭಾಗವಹಿಸದೇ ಇರುವುದು ಹಲವು ಪ್ರಶ್ನೆಗಳನ್ನು ಉದ್ಭವಿಸಿದೆ.