
ನವದೆಹಲಿ, ಆಗಸ್ಟ್ 18: ಮಾರಕ ಕೊರೊನಾವೈರಸ್, ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ನಿರ್ಧಾರ ತಾಳುವಂತೆ ಮಾಡಿತು ಎಂದು ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೇಳಿದ್ದಾರೆ. ಕೋವಿಡ್-19 ಬಾರದಿದ್ದರೆ ಧೋನಿ ಟಿ20 ವಿಶ್ವಕಪ್ನಲ್ಲಿ ಆಡುತ್ತಿದ್ದರು ಎಂದು ಚಾಹಲ್ ಅಭಿಪ್ರಾಯಿಸಿದ್ದಾರೆ.
ಟೀಮ್ ಇಂಡಿಯಾಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಒಬ್ಬನೇ ಒಬ್ಬ ನಾಯಕ ಎಂಎಸ್ ಧೋನಿ. ಕೂಲ್ ಕ್ಯಾಪ್ಟನ್ ಎಂದೇ ಹೆಸರಾದ ಧೋನಿ ಕಳೆದ ಶನಿವಾರ (ಆಗಸ್ಟ್ 15) ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಧೋನಿ ಬೆನ್ನಲ್ಲೇ ಭಾರತದ ಮತ್ತೊಬ್ಬ ಆಟಗಾರ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಹೇಳಿದ್ದರು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದ ಟಿ20 ವಿಶ್ವಕಪ್ನಲ್ಲಿ ಧೋನಿ ಆಡುವುದರಲ್ಲಿದ್ದರು. ಆದರೆ ಕೊರೊನಾವೈರಸ್ ಕಾರಣ ಈ ಟೂರ್ನಿ 2022ಕ್ಕೆ ಮುಂದೂಡಲ್ಪಟ್ಟಿತು. ಹೀಗಾಗಿ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಇಲ್ಲದಿದ್ದರೆ ಧೋನಿ ಟಿ20 ವಿಶ್ವಕಪ್ನಲ್ಲಿ ಆಡುತ್ತಿದ್ದರು ಎಂಬ ಗಾಳಿಸುದ್ದಿ ಕ್ರಿಕೆಟ್ ವಲಯದಲ್ಲಿ ಓಡಾಡುತ್ತಿದೆ.
ನ್ಯೂಸ್ 18 ಇಂಡಿಯಾದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಚಾಹಲ್, 'ಧೋನಿಯ ನಿವೃತ್ತಿ ನಿಜಕ್ಕೂ ಆಘಾತಕಾರಿ. ಕೊರೊನಾ ಕೂಡ ಅವರ ನಿರ್ಧಾರದಲ್ಲಿ ಪಾತ್ರವಹಿಸಿತು ಎಂದು ನನಗನ್ನಿಸುತ್ತದೆ. ಇಲ್ಲದಿದ್ದರೆ ಧೋನಿ ಟಿ20 ವಿಶ್ವಕಪ್ನಲ್ಲಿ ಆಡುತ್ತಿದ್ದರು,' ಎಂದಿದ್ದಾರೆ.