
ಬಾಲಿವುಡ್ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ತ್ ನಿನ್ನೆ ( ಮೇ 31 ) ಇಹಲೋಕ ತ್ಯಜಿಸಿ ತಮ್ಮ ಗಾಯನವನ್ನು ಶಾಶ್ವತವಾಗಿ ನಿಲ್ಲಿಸಿದ್ದಾರೆ. ಕೋಲ್ಕತ್ತಾದ ನಜ್ರುಲ್ ಮಂಚ್ ಎಂಬಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಕೃಷ್ಣಕುಮಾರ್ ಕುನ್ನತ್ತ್ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕೋಲ್ಕತ್ತಾದ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷ್ಣ ಕುಮಾರ್ ಕುನ್ನತ್ತ್ ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿಯೇ ವೇದಿಕೆ ಮೇಲೆ ಕುಸಿದು ಬಿದ್ದಿದ್ದರು. ಹೀಗೆ ಕುಸಿದು ಬಿದ್ದ ಕೆಕೆ ಅವರನ್ನು ಕೂಡಲೇ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಕುಮಾರ್ ಕುನ್ನತ್ತ್ ತಮ್ಮ 53ನೇ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ತಮ್ಮ ಮಡದಿ ಜ್ಯೋತಿ ಮತ್ತು ಇಬ್ಬರು ಮಕ್ಕಳನ್ನು ಕೆಕೆ ಅಗಲಿದ್ದಾರೆ.
ಹೀಗೆ ಕೃಷ್ಣಕುಮಾರ್ ಕುನ್ನತ್ ಅವರ ದಿಢೀರ್ ಸಾವಿನ ಸುದ್ದಿ ಕೇಳಿ ಚಿತ್ರರಂಗ, ಸಂಗೀತಪ್ರಿಯರು ಮಾತ್ರವಲ್ಲದೇ ಕ್ರೀಡಾ ಜಗತ್ತು ಕೂಡ ಕಂಬನಿ ಮಿಡಿದಿದೆ.
ಕೋಲ್ಕತ್ತಾದಲ್ಲಿ ಪ್ರದರ್ಶನ ನೀಡುತ್ತಿರುವಾಗ ಅನಾರೋಗ್ಯಕ್ಕೆ ಒಳಗಾದ ಕೆಕೆ ನಿಧನ ಜೀವನವು ಎಷ್ಟು ದುರ್ಬಲ ಎಂಬುದಕ್ಕೆ ಮತ್ತೊಂದು ಘಟನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಓಂ ಶಾಂತಿ ಎಂದು ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂ ಮಾಡಿದ್ದಾರೆ.
ಕೊಲ್ಕತ್ತಾದಲ್ಲಿ ಗಾಯಕ ಕೆಕೆ ನಿಧನ ಎಂದು ಭಾರತೀಯ ಕ್ರಿಕೆಟ್ ಸಯ್ಯದ್ ಸಬಾ ಕರೀಮ್ ಕೂ ಮಾಡಿದ್ದಾರೆ.
ಹಮ್, ರಹೆನ್ ಯಾ ನಾ ರಹೇನ್ ಕಲ್
ಕಲ್ ಯಾದ್ ಆಯೇಂಗೆ ಕೆ ಯೇ ಪಾಲ್
ಪಾಲ್, ಯೇ ಹೈ ಪ್ಯಾರ್ ಕೆ ಪಾಲ್
ಚಲ್, ಆ ಮೇರೆ ಸಾಂಗ್ ಚಲ್
ಚಲ್, ಸೋಚೆ ಕ್ಯಾ
ಛೋಟಿ ಸಿ, ಹೈ ಜಿಂದಗಿ
ಕಲ್, ಮಿಲ್ ಜಾಯೆ ತೋ ಹೋಗಿ ಖುಷ್-ನಸೀಬಿ!
ಎಂದು ಕುನ್ನತ್ ಅವರ ಪ್ರಸಿದ್ಡ ಹಾಡಿನ ಸಾಹಿತ್ಯವನ್ನು ಬರೆದು ಭಾರತದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಗಾಯಕ ಕೆಕೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಕೃಷ್ಣಕುಮಾರ್ ಕುನ್ನತ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕೆಕೆ ಸಾವಿನ ಸುದ್ದಿ ಕೇಳಿ ಅಕ್ಷರಶಃ ದಿಗ್ಭ್ರಮೆಯಾಯಿತು, ಇದೊಂದು ತುಂಬಲಾರದ ನಷ್ಟ. ನಿಮ್ಮ ಹಾಡುಗಳು ಎಂದಿಗೂ ನಮ್ಮ ಮನದಲ್ಲಿರುತ್ತವೆ, ನೀವೊಬ್ಬರು ದಂತಕತೆ, ಅವರ ಪ್ರೀತಿ ಪಾತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.