ಲಂಡನ್, ನ 14: ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಹೀದ್ ಅಫ್ರಿದಿ, ತನ್ನದೇ ದೇಶ ಮುಜುಗರ ಪಡುವಂತಹ ಹೇಳಿಕೆಯನ್ನು ನೀಡಿದ್ದಾರೆ.
ಯುಕೆ ಹೌಸ್ ಆಫ್ ಕಾಮನ್ಸ್ ಸಭೆಯಲ್ಲಿ ಮಾತನಾಡುತ್ತಿದ್ದ ಅಫ್ರಿದಿ, ಭಾರತವೇ ಆಗಲಿ ಪಾಕಿಸ್ತಾನವೇ ಆಗಲಿ ಮೊದಲು ಮಾನವೀಯತೆಗೆ ಬೆಲೆಯನ್ನು ಕೊಡುವುದನ್ನು ಕಲಿಯಬೇಕು. ಕಾಶ್ಮೀರದಲ್ಲಿ ಸಾರ್ವಜನಿಕರ ಜೀವಹಾನಿಯಾದರೆ, ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಅಫ್ರಿದಿ ಹೇಳಿದ್ದಾರೆ.
ಕಾಶ್ಮೀರ, ಪಾಕಿಸ್ತಾನಕ್ಕೆ ಬೇಕಾಗಿಲ್ಲ. ಮೊದಲು ನಾವು ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳನ್ನು ಉಳಿಸಿಕೊಳ್ಳೋಣ, ಆ ನಂತರ ಕಾಶ್ಮೀರದ ಬಗ್ಗೆ ಕಾಳಜಿ ವಹಿಸೋಣ ಎಂದು ಪರೋಕ್ಷವಾಗಿ, ಪ್ರಧಾನಿ ಇಮ್ರಾನ್ ಖಾನಿಗೆ ಟಾಂಗ್ ನೀಡಿದ್ದಾರೆ.
ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನು (ಸಿಂಧ್, ಪಂಜಾಬ್, ಬಲೂಚಿಸ್ತಾನ್, ಖೈಬರ್ ಪಕ್ತೂನ್) ಉಳಿಸಿಕೊಳ್ಳುವುದೇ ದುಸ್ತರವಾಗಿರುವಾಗ ಕಾಶ್ಮೀರದ ಬಗ್ಗೆ ಚಿಂತೆ ಯಾಕೆ? ಕಾಶ್ಮೀರವನ್ನು ಸ್ವಾಯತ್ತತೆಯಿಂದ ಇರಲು ಬಿಡೋಣ ಎಂದು ಅಫ್ರಿದಿ ಹೇಳಿದ್ದಾರೆ.
ನಮಗೆ ಕಾಶ್ಮೀರ ಬೇಡ, ಹಾಗಂತ ಅದನ್ನು ಭಾರತಕ್ಕೆ ಬಿಟ್ಟುಕೊಡಬೇಕು ಎಂದು ನಾನು ಹೇಳುತ್ತಿಲ್ಲ. ಯಾವುದೇ ಜಾತಿ, ಧರ್ಮದವರು ಇರಲಿ, ಮೊದಲು ಮನುಷ್ಯತ್ವಕ್ಕೆ ಬೆಲೆಕೊಡುವುದನ್ನು ಕಲಿಯಬೇಕು ಎಂದು ಶಹೀದ್ ಅಫ್ರಿದಿ ಪಾಕ್ ಸರಕಾರಕ್ಕೆ ಕಿವಿಹಿಂಡಿದ್ದಾರೆ.
ಸದಾ ಸುದ್ದಿಯಲ್ಲರಲು ಕೆಲವರಿಗೆ ಭಾರತದ ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಹೇಳಿಕೆ ನೀಡುವುದು ಹವ್ಯಾಸವಾಗಿದೆ. ಇಂತವರ ಮಾತಿಗೆ ಸೊಪ್ಪುಹಾಕುವ ಅವಶ್ಯಕತೆಯಿಲ್ಲ ಎಂದು ಪಾಕ್ ರಾಜಕಾರಣಿಗಳನ್ನು ಅಫ್ರಿದಿ ಛೇಡಿಸಿದ್ದಾರೆ.
ಕಾಶ್ಮೀರದ ಭಾಗದಲ್ಲಿ ಶಾಂತಿಯಿಲ್ಲ, ಭಾರತ ಮತ್ತು ಪಾಕಿಸ್ತಾನ ಸಂಧಾನದ ಮೂಲಕ ದಶಕದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಇತ್ತೀಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.