
ಅಕ್ಟೋಬರ್ 23 ರ ಶುಕ್ರವಾರದಂದು ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೃದಯಾಘಾತದಿಂದ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಅವರ ಆರೋಗ್ಯ ಸ್ಥಿರವಾಗಿದೆ.
ದೇಶಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ಭಾರತ ಇದುವರೆಗೆ ಕಂಡಂತಹ ಅತ್ಯುತ್ತಮ ಕ್ರಿಕೆಟಿಂಗ್ ಪ್ರತಿಭೆಗಳಲ್ಲಿ ಒಬ್ಬರು. ಕಪಿಲ್ ದೇವ್ ಅವರು 1983 ರ ವಿಶ್ವಕಪ್ನ ಫೈನಲ್ನಲ್ಲಿ ಪ್ರಬಲ ವೆಸ್ಟ್ ಇಂಡೀಸ್ ವಿರುದ್ಧ ಜಯ ದಾಖಲಿಸುವ ಮೂಲಕ ಜನರು ಆಟವನ್ನು ನೋಡುವ ವಿಧಾನವನ್ನು ಬದಲಾಯಿಸಿದ್ದರು.
61 ವರ್ಷದ ಕಪಿಲ್ದೇವ್ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನು ಮೊದಲು ಎಕನಾಮಿಕ್ ಟೈಮ್ಸ್ ಪತ್ರಕರ್ತೆ ಟೀನಾ ಠಾಕರ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಬಹಿರಂಗಪಡಿಸಿದ್ದಾರೆ. ಮಾಜಿ ಕ್ರಿಕೆಟಿಗನಿಗೆ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳೂ ಇದ್ದವು ಎಂದು ವರದಿಯಾಗಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ, ವಿಶ್ವದ ಮೂಲೆ ಮೂಲೆಯಿಂದ ಕ್ರಿಕೆಟ್ ದಿಗ್ಗಜರು, ಮಾಜಿ ಆಟಗಾರರು, ಹಾಲಿ ಆಟಗಾರರು ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಕಪಿಲ್ ದೇವ್ ಬೇಗ ಚೇತರಿಸಿಕೊಳ್ಳಲಿ ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.