ಅಜಿತ್ ಅಗರ್ಕರ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪುರುಷರ ಹಿರಿಯ ಆಯ್ಕೆ ಸಮಿತಿಯು ಸೋಮವಾರ, ಆಗಸ್ಟ್ 21ರಂದು ನವದೆಹಲಿಯಲ್ಲಿ ಮಹತ್ವದ ಸಭೆ ಸೇರಲಿದೆ.
ಈ ವೇಳೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಗಸ್ಟ್ 30ರಿಂದ ಆರಂಭವಾಗಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ನವದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಂಡದ ಆಯ್ಕೆಯ ಸುದ್ದಿಯನ್ನು ಕೇಳಲು ಉತ್ಸುಕರಾಗಿದ್ದಾರೆ.

ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ತಮ್ಮ ಏಷ್ಯಾ ಕಪ್ ತಂಡವನ್ನು ಪ್ರಕಟಿಸಿವೆ. ಆದರೆ, ತಮ್ಮ ಪ್ರಮುಖ ಆಟಗಾರರ ಗಾಯದ ಕಾಳಜಿಯಿಂದಾಗಿ ಭಾರತ ತಂಡದ ಪ್ರಕಟಣೆಯಲ್ಲಿ ವಿಳಂಬವಾಗಿದೆ. ಇದೀಗ ಪಂದ್ಯಾವಳಿ ಸಮೀಪಿಸುತ್ತಿರುವ ಕಾರಣ ತಂಡವನ್ನು ಅಂತಿಮಗೊಳಿಸಲಾಗುತ್ತಿದೆ.
ಇನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಈಗಾಗಲೇ ಏಕದಿನ ವಿಶ್ವಕಪ್ಗೆ ತಮ್ಮ ತಾತ್ಕಾಲಿಕ ತಂಡಗಳನ್ನು ಪ್ರಕಟಿಸಿದ್ದು, ಇತ್ತ ಪಾಕಿಸ್ತಾನ ಕೂಡ ತಮ್ಮ ಏಷ್ಯಾ ಕಪ್ ತಂಡವನ್ನು ಪ್ರಕಟಿಸಿದೆ.
ಇದೀಗ ಪ್ರಕಟಿಸಿರುವ ತಂಡಗಳು 15ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿವೆ. ಭಾರತ 15 ಸದಸ್ಯರ ತಂಡವನ್ನು ಆಯ್ಕೆ ಮಾಡುತ್ತದೆಯೇ ಅಥವಾ ಒಂದೆರಡು ಆಟಗಾರರನ್ನು ಹೆಚ್ಚು ಆಯ್ಕೆ ಮಾಡುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ವೇಗಿ ಜಸ್ಪ್ರೀತ್ ಬುಮ್ರಾ, ಬ್ಯಾಟರ್ಗಳಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಸ್ಟಾರ್ ಆಟಗಾರರ ಫಿಟ್ನೆಸ್ ವರದಿಯ ಬಗ್ಗೆ ಭಾರತ ಯೋಚಿಸುತ್ತಿದೆ.
ಈ ವರ್ಷದ ಆರಂಭದಲ್ಲಿ ಬೆನ್ನಿನ ಮೂಳೆ ಮುರಿತಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಜಸ್ಪ್ರೀತ್ ಬುಮ್ರಾ, ಆಗಸ್ಟ್ 18ರಿಂದ ಐರ್ಲೆಂಡ್ನಲ್ಲಿ ಆರಂಭವಾಗುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇನ್ನು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ನಲ್ಲಿ ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ.
ಭಾರತ ತಂಡವು ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ ಬ್ಯಾಕ್ಅಪ್ ಆಟಗಾರರನ್ನು ಆಯ್ಕೆ ಮಾಡುತ್ತದೆಯೇ ಎಂದು ಕಾದು ನೋಡಬೇಕಿದೆ. ಆದರೆ, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದಿರುವುದು ತಲೆನೋವು ತರಿಸಿದೆ.