
ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನತ್ತ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ನಡೆಯಲಿದೆ. ಬುಧವಾರ (ಜನವರಿ 20) ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿವೆ.
ಫ್ರಾಂಚೈಸಿಗಳು ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸುವುದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಫ್ರಾಂಚೈಸಿ ಕೇದಾರ್ ಜಾಧವ್, ಪೀಯೂಷ್ ಚಾವ್ಲಾ ಮತ್ತು ಮುರಳಿ ವಿಜಯ್ ಅವರನ್ನು ಬಿಟ್ಟುಕೊಡಲಿದೆ ಎಂದು ವರದಿಯೊಂದು ಹೇಳಿದೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ, 2021ರ ಐಪಿಎಲ್ನಿಂದ ಸಿಎಸ್ಕೆ ಫ್ರಾಂಚೈಸಿ ಆಲ್ ರೌಂಡರ್ ಜಾಧವ್, ಸ್ಪಿನ್ನರ್ ಚಾವ್ಲಾ, ಬ್ಯಾಟ್ಸ್ಮನ್ ಮುರಳಿ ವಿಜಯ್ ಅವರನ್ನು ಬಿಟ್ಟುಕೊಡಲಿದೆ ಎನ್ನಲಾಗಿದೆ. ಕಳೆದ ಸೀಸನ್ನಲ್ಲಿ ಈ ಮೂವರೂ ಆಟಗಾರರು ಕಾಡಿದ್ದೇ ಕಡಿಮೆ, ಆಡಿದರಲ್ಲೂ ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ.
ಸುರೇಶ್ ರೈನಾ ಅವರನ್ನು ಸಿಎಸ್ಕೆ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಈಗಾಗಲೇ ಚೆನ್ನೈಯೊಂದಿಗಿನ ಒಪ್ಪಂದ ಕೊನೆಯೊಂಡಿರುವುದನ್ನು ಟ್ವೀಟ್ ಮೂಲಕ ಖಾತರಿಪಡಿಸಿದ್ದಾರೆ. ಮಾಹಿತಿ ಪ್ರಕಾರ ಎಂಎಸ್ ಧೋನಿಯೇ 2021ರ ಐಪಿಎಲ್ಗೂ ಸಿಎಸ್ಕೆ ನಾಯಕರಾಗಿರಲಿದ್ದಾರೆ.