ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗಾಗಿ ಭಾನುವಾರ ಎಂ.ಎ. ಚಿದಂಬರಂ ಮೈದಾನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಐದು ಬಾರಿ ಚಾಂಪಿಯನ್ ಸಿಎಸ್ಕೆ ಅಭಿಮಾನಿಗಳನ್ನು ರಂಜಿಸಿತು. ಇದೇ ವೇಳೆ ಐಸಿಸಿ ಟೂರ್ನಿಯಲ್ಲಿ ಸಾಧನೆ ಮಾಡಿದ ತಮ್ಮದೇ ತಂಡದ ಆಟಗಾರರನ್ನು ಗೌರವಿಸಲಾಯಿತು. ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ಆಟಗಾರರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದು ಮಹೇಂದ್ರ ಸಿಂಗ್ ಧೋನಿ.
ಈ ಕಾರ್ಯಕ್ರಮದಲ್ಲಿ ಸಿಎಸ್ಕೆ ತಂಡದ ಮಾಜಿ ಆಟಗಾರರಾದ ಮ್ಯಥ್ಯೂ ಹೇಡನ್, ಮೈಕ್ ಹಸಿ, ಡ್ವೇನ್ ಬ್ರಾವೊ, ಮುತ್ತಯ್ಯ ಮುರಳಿಧರನ್, ಮುರಳಿ ವಿಜಯ್, ಪಾರ್ಥಿವ್ ಪಟೇಲ್, ಎಸ್ ಬದರೀನಾಥ್, ಸುರೇಶ್ ರೈನಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಹಳದಿ ಜೆರ್ಸಿಯಲ್ಲಿ ಕಂಗೊಳಿಸಿದರು.

44 ವರ್ಷದ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇರಲಿಲ್ಲ. ಇವರನ್ನು ನೋಡಲೆಂದೆ ಭಾನುವಾರದ ಕಾರ್ಯಕ್ರಮದ ಟಿಕೆಟ್ಗಳನ್ನು ಅಭಿಮಾನಿಗಳು ಕೊಂಡಿದ್ದರು. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು.
ಸಿಎಸ್ಕೆ ರೋರ್ 26 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ತಂಡ ಸಿಎಸ್ಕೆ ತಂಡದ ಮಾಜಿ ಆಟಗಾರರು ಹಾಗೂ ಇತ್ತೀಚಿಗೆ ನಡೆದ ವಿಶ್ವಕಪ್ ಗೆದ್ದ ತಂಡದ ಸದಸ್ಯರನ್ನು ಗೌರವಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಅಂಡರ್ 19 ವಿಶ್ವಕಪ್ ತಂಡದ ನಾಯಕ ಆಯುಷ್ ಮಾತ್ರೆ, ಟಿ20 ವಿಶ್ವಕಪ್ ತಂಡದ ಸದಸ್ಯ ಶಿವಂ ದುಬೆ, ಸಂಜು ಸ್ಯಾಮ್ಸನ್ ಅವರನ್ನು ಗೌರವಿಸಲಾಯಿತು.
ಸಿಎಸ್ಕೆ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಕಣ್ಣು ತುಂಬಿಕೊಳ್ಳಲು ಮೈದಾನದತ್ತ ದೌಡಾಯಿಸಿದ್ದರು. ಇದೇ ವೇಳೆ ಮಾಜಿ ಆಟಗಾರರು ಮೋಜು ಮಸ್ತಿ ಮಾಡಿದರು.
2025 ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ನಿರಾಶಾದಾಯಕ ವಾಗಿತ್ತು. ಕಳೆದ ಋತುವನ್ನು ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಗಿಸಿತ್ತು. 2025 ರ ಐಪಿಎಲ್ನಲ್ಲಿ ಚೆನ್ನೈ ತಂಡ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 19ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಸಿಎಸ್ಕೆ ರಾಜಸ್ಥಾನ ರಾಯಲ್ಸ್ ವಿರುದ್ಧ ಮಾರ್ಚ್ 30 ರಂದು ಕಾದಾಟ ನಡೆಸಲಿದೆ.