ಪ್ರತಿ ಐಪಿಎಲ್ನಲ್ಲಿ ಪ್ರತಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್, ಈ ಬಾರಿ ಹೀನಾಯ ಸೋಲನ್ನು ಕಂಡಿದೆ. ಈ ಲೀಗ್ನ ಆರಂಭ ಚೆನ್ನೈಗೆ ಯಾವುದೇ ದುಃಸ್ವಪ್ನಕ್ಕಿಂತ ಕಡಿಮೆ ಇಲ್ಲ. ಈ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡುತ್ತಿರುವ ಪ್ರದರ್ಶನ ನಿಜಕ್ಕೂ ಅಭಿಮಾನಿಗಳು ಬಹುವಾಗಿ ಕಾಡುತ್ತಿದೆ. ಇಷ್ಟು ದಿನಗಳ ಕಾಲ ಬೇರೆ ತಂಡಗಳ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಡುತ್ತಿದ್ದ ಚೆನ್ನೈ ತಂಡ ಈಗ ಪ್ಲೇ ಆಫ್ ಲೆಕ್ಕಾಚಾರ ಆರಂಭಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಅಬ್ಬರದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಲೀಗ್ನಲ್ಲಿ ಸಿಎಸ್ಕೆ ಆಡಿದ 6 ಪಂದ್ಯಗಳಲ್ಲಿ 1 ಜಯ, 5 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸದ್ಯದ ಸಿಎಸ್ಕೆ ಪ್ರದರ್ಶನ ನೋಡಿದರೆ ಪ್ಲೇ ಆಫ್ ಹಾದಿ ಕಷ್ಟಕರವಾಗಿದೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಇಷ್ಟೊಂದು ಪಂದ್ಯಗಳನ್ನು ಎಂದಿಗೂ ಸೋತಿರಲಿಲ್ಲ. ರುತುರಾಜ್ ಗಾಯಕ್ವಾಡ್ ಲೀಗ್ ಮಧ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು ಮತ್ತೆ ಚುಕ್ಕಾಣಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೆಗಲೇರಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನೂ 8 ಪಂದ್ಯಗಳು ಬಾಕಿ ಇವೆ. ಉಳಿದಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸಿಎಸ್ಕೆ ಗೆದ್ದರೆ, ಅದು ಪ್ಲೇಆಫ್ಗೆ ಅರ್ಹತೆ ಪಡೆಯಬಹುದು. ಆದರೆ ಇದಕ್ಕಾಗಿ ಅದರ ಬೌಲರ್ಗಳು ಮತ್ತು ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
ಚೆನ್ನೈ ತವರಿನಲ್ಲಿ ಸಾಲು ಸಾಲು ಪಂದ್ಯಗಳನ್ನು ಸೋತಿದೆ. ಮೊದಲ ಪಂದ್ಯವನ್ನು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ತವರಿನಲ್ಲಿ ಮುಖಭಂಗ ಅನುಭವಿಸಿದೆ. ಮೊದಲು ಚೆನ್ನೈನಲ್ಲಿ ಆರ್ಸಿಬಿ 17 ವರ್ಷಗಳ ಬಳಿಕ ಜಯ ಸಾಧಿಸಿದರೆ, 10 ವರ್ಷಗಳ ಬಳಿಕ ಸಿಎಸ್ಕೆ ತಂಡವನ್ನು ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿವೆ. ಅಲ್ಲದೆ ಕೆಕೆಆರ್ ವಿರುದ್ಧವೂ ಚೆನ್ನೈ 8 ವಿಕೆಟ್ಗಳ ಹೀನಾಯ ಸೋಲು ಕಂಡಿದ್ದು, ತವರಿನಲ್ಲಿ ಹೀನಾಯ ಸೋಲನ್ನು ಕಂಡಿದೆ.

ಇದೇ ರೀತಿಯ ಪರಿಸ್ಥಿತಿಯನ್ನು ಈ ಹಿಂದೆ ಮುಂಬೈ ಇಂಡಿಯನ್ಸ್ ಎದುರಿಸಿತ್ತು. 2015ರಲ್ಲಿ ಮುಂಬೈ ಸಾಲು ಸಾಲು ಸೋಲನ್ನು ಕಂಡರೂ ಸಹ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತ್ತು. ಸಿಎಸ್ಕೆ ಸೋಲಿನಿಂದ ಪಾಠ ಕಲಿತು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪಾಯಿಂಟ್ಸ್ ಟೇಬಲ್ನಲ್ಲಿ ಮುನ್ನಡೆ ಸಾಧಿಸಬಹುದಾಗಿದೆ. ಇದಕ್ಕೆ ಸಿಎಸ್ಕೆ ಸಂಘಟಿತ ಆಟದ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.