ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ, ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. 2019 ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಈ ದಾಳಿಯ ನಂತರ, ಪ್ರಪಂಚದಾದ್ಯಂತ ಪ್ರತಿಕ್ರಿಯೆಗಳು ಬರಲು ಪ್ರಾರಂಭಿಸಿವೆ. ಆದರೆ ಪಾಕಿಸ್ತಾನದಿಂದ ಬಹಳ ಕಡಿಮೆ ಪ್ರತಿಕ್ರಿಯೆ ಬಂದಿವೆ. ಕೆಲವು ಆಟಗಾರರನ್ನು ಹೊರತುಪಡಿಸಿ, ಯಾರೂ ಈ ಉಗ್ರರ ದಾಳಿಯನ್ನು ಖಂಡಿಸಲಿಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರೊಬ್ಬರು ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದರು. ನಂತರ ಮತ್ತೊಬ್ಬ ಮಾಜಿ ಆಟಗಾರ ಡ್ಯಾನಿಶ್ ಕನೇರಿಯಾ ದಾಳಿಯನ್ನು ಖಂಡಿಸಿದರು.

ಡ್ಯಾನಿಶ್ ಕನೇರಿಯಾ ಸಾಮಾಜಿಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮದೇ ದೇಶದ ಪ್ರಧಾನಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡ್ಯಾನಿಶ್ ಕನೇರಿಯಾ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಲ್ಲದೆ, ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲದಿದ್ದರೆ, ಪ್ರಧಾನಿ ಶಹಬಾಜ್ ಷರೀಫ್ ಇನ್ನೂ ಅದನ್ನು ಏಕೆ ಖಂಡಿಸಿಲ್ಲ?. ನಿಮ್ಮ ಸೈನ್ಯ ಇದ್ದಕ್ಕಿದ್ದಂತೆ ಏಕೆ ಜಾಗರೂಕವಾಗಿದೆ? ಒಳಗಿನ ಸತ್ಯ ನಿಮಗೆ ತಿಳಿದಿರುವುದರಿಂದ, ನೀವು ಭಯೋತ್ಪಾದಕರನ್ನು ಪೋಷಿಸುತ್ತೀರಿ. ನಿನಗೆ ನಾಚಿಕೆಯಾಗಬೇಕು' ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನದ ಪ್ರಧಾನ ಮಂತ್ರಿಯನ್ನು ತೀವ್ರವಾಗಿ ಟೀಕಿಸಿದ ಒಂದು ದಿನದ ನಂತರ, ಡ್ಯಾನಿಶ್ ಕನೇರಿಯಾ ಈಗ ಭಯೋತ್ಪಾದಕರನ್ನು "ಸ್ವಾತಂತ್ರ್ಯ ಹೋರಾಟಗಾರರು' ಎಂದು ಕರೆದಿದ್ದಕ್ಕಾಗಿ ಉಪ ಪ್ರಧಾನ ಮಂತ್ರಿ ಇಶಾಕ್ ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಶಾಕ್ ದಾರ್ ಅವರು ಭಯೋತ್ಪಾದಕರಿಗೆ ಆಶ್ರಯ ನೀಡಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಕನೇರಿಯಾ ಹೇಳಿದ್ದಾರೆ.
ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಭಯೋತ್ಪಾದಕರನ್ನು "ಸ್ವಾತಂತ್ರ್ಯ ಹೋರಾಟಗಾರರು' ಎಂದು ಕರೆದಾಗ, ಅದು ಅವಮಾನಕರ ಮಾತ್ರವಲ್ಲ, ಅದು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗವಾಗಿ ಒಪ್ಪಿಕೊಂಡಂತೆಯೂ ಇದೆ ಎಂದು ಇಶಾಕ್ ದಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕನೇರಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.