ಶ್ರೀಲಂಕಾ ತಂಡದ ನಾಯಕ, ಸ್ಫೋಟಕ ಆಲ್ರೌಂಡರ್ ಕೊನೆಗೂ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತಂಡದ ಪ್ರಮುಖ ಬ್ಯಾಟರ್ ಕೇನ್ ವಿಲಿಯಮ್ಸನ್ ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದ ಬಳಿಕ ಶನಕ ಅವರ ಬದಲಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೂರು ಏಕದಿನ ಪಂದ್ಯಗಳಲ್ಲಿ 121 ರನ್ ಗಳಿಸಿದ್ದ ಅವರು, ಟಿ20 ಸರಣಿಯ ಮೂರು ಪಂದ್ಯಗಳಲ್ಲಿ 62 ಸರಾಸರಿಯಲ್ಲಿ 187.88 ಸ್ಟ್ರೈಕ್ರೇಟ್ನಲ್ಲಿ 124 ರನ್ ಗಳಿಸಿದ್ದರು. ಅಲ್ಲದೆ ಎರಡು ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು.
ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ 2 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸಿ ಶ್ರೀಲಂಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ವರ್ಷ ಏಷ್ಯಾಕಪ್ನಲ್ಲಿ ದಸುನ್ ಶನಕ ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಲಿಷ್ಠ ಭಾರತ ಮತ್ತು ಪಾಕಿಸ್ತಾನ ತಂಡವನ್ನು ಮಣಿಸಿದ್ದ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಅನುಭವಿ ಆಲ್ರೌಂಡರ್
ದಸುನ್ ಶನಕ ಅತ್ಯಂತ ಅನುಭವಿ ಕ್ರಿಕೆಟರ್, ಇದುವರೆಗೂ 86 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಅವರು 21.1 ಸರಾಸರಿಯಲ್ಲಿ, 121.59 ಸ್ಟ್ರೈಕ್ರೇಟ್ನಲ್ಲಿ 1329 ರನ್ ಗಳಿಸಿದ್ದಾರೆ. 40 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 21.12 ಸರಾಸರಿಯಲ್ಲಿ 25 ವಿಕೆಟ್ ಪಡೆದುಕೊಂಡಿದ್ದಾರೆ. ಅಪಾರ ಅನುಭವ ಹೊಂದಿರುವ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತಂಡಕ್ಕೆ ಕೊಡುಗೆ ನೀಡಬಲ್ಲ ಆಟಗಾರ.
ಭಾರತದ ಸನ್ನಿವೇಶದಲ್ಲಿ ಶನಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಲ್ಲಿನ ಪಿಚ್ಗಳಲ್ಲಿ ಆಡಿರುವ ಅನುಭವ ಹೊಂದಿರುವ ಅವರು ಯಾವುದೇ ತಂಡಕ್ಕೆ ಉತ್ತಮ ಸೇರ್ಪಡೆ. ಆದರೂ ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದೇ ತಂಡ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತೋರಿಸಲಿಲ್ಲ. ಭಾರತದ ವಿರುದ್ಧದ ಸರಣಿಯಲ್ಲಿ ಆಡಿದ ಬಳಿಕ ಅವರು ಯಾವುದಾರೂ ತಂಡ ಸೇರಿಕೊಳ್ಳುವ ಸಾಧ್ಯತೆ ಇತ್ತು. ಈಗ ನಿರೀಕ್ಷೆ ನಿಜವಾಗಿದೆ.
ಸದ್ಯ ದಸುನ್ ಶನಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದು, ಏಪ್ರಿಲ್ 8 ಬಳಿಕ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಕೇನ್ ವಿಲಿಯಮ್ಸನ್ ಅವರ ಸೇವೆಯನ್ನು ಕಳೆದುಕೊಂಡ ಬಳಿಕ, ದಸುನ್ ಶನಕರಂತಹ ಅನುಭವಿ ಆಲ್ರೌಂಡರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಅತ್ಯುತ್ತಮ ನಿರ್ಧಾರ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಹೇಳಿದ್ದಾರೆ.
ಗುಜರಾತ್ ಜೈಂಟ್ಸ್ ಸಂಪೂರ್ಣ ತಂಡ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಳ್, ಅಲ್ಜಾರಿ ಜೋಸೆಫ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಜಯಂತ್ ಯಾದವ್, ಮನ್ ಶಂಕರ್, ಅಭಿನವ್ ಶಂಕರ್, ಶ್ರೀಕರ್ ಭರತ್, ಮೋಹಿತ್ ಶರ್ಮಾ, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ದಸುನ್ ಶನಕ.