
ಭಾರತ ದೇಶದಲ್ಲಿ ಅತಿ ಹೆಚ್ಚಾಗಿ ಅಭಿಮಾನಿಗಳನ್ನು ಹೊಂದಿರುವ ಹಾಗೂ ಖ್ಯಾತಿಯನ್ನು ಪಡೆದಿರುವ ಇಬ್ಬರು ಆಟಗಾರರೆಂದರೆ ಅದು ಎಬಿ ಡಿವಿಲಿಯರ್ಸ್ ಮತ್ತು ಡೇವಿಡ್ ವಾರ್ನರ್. ಎಬಿ ಡಿವಿಲಿಯರ್ಸ್ ಹಾಗೂ ಡೇವಿಡ್ ವಾರ್ನರ್ ಇಬ್ಬರೂ ಸಹ ಭಾರತ ನನ್ನ ಎರಡನೇ ದೇಶವಿದ್ದಂತೆ ಎಂಬ ಹೇಳಿಕೆಗಳನ್ನು ನೀಡುವುದರ ಮೂಲಕ ಈಗಾಗಲೇ ಹಲವಾರು ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ.
ಅದರಲ್ಲಿಯೂ ಡೇವಿಡ್ ವಾರ್ನರ್ ವಿಶೇಷವಾಗಿ ದಕ್ಷಿಣ ಭಾರತ ಚಿತ್ರಗಳ ಡೈಲಾಗ್ ಮತ್ತು ಹಾಡುಗಳಿಗೆ ವಿಡಿಯೋ ಮಾಡುವುದರ ಮೂಲಕ ಹಲವಾರು ಭಾರತೀಯರ ಹೃದಯವನ್ನು ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.
ಮೊದಲಿಗೆ ತೆಲುಗು ಚಿತ್ರಗಳ ಸಂಭಾಷಣೆ ಹಾಗೂ ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿದ್ದ ಡೇವಿಡ್ ವಾರ್ನರ್ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ತನ್ನ ಪತ್ನಿ ಜತೆ ನೃತ್ಯವನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು. ಹೀಗೆ ಡೇವಿಡ್ ವಾರ್ನರ್ ಮಾಡಿದ್ದ ಈ ವಿಡಿಯೋಗೆ ಭಾರತ ಕ್ರಿಕೆಟ್ ಪ್ರೇಕ್ಷಕರು ಹಾಗೂ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದ ನಂತರ ಡೇವಿಡ್ ವಾರ್ನರ್ ಮತ್ತಷ್ಟು ತೆಲುಗು ಚಿತ್ರಗಳ ಹಾಡು ಮತ್ತು ದೃಶ್ಯಗಳಿಗೆ ವಿಡಿಯೋ ಮಾಡಲು ಆರಂಭಿಸಿದರು.
ಹೀಗೆ ಡೇವಿಡ್ ವಾರ್ನರ್ ಅವರ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಇತರ ಖ್ಯಾತ ಕ್ರಿಕೆಟಿಗರು ಕೂಡ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳ ಹಾಡು ಮತ್ತು ದೃಶ್ಯಗಳಿಗೆ ವಿಡಿಯೋ ಮಾಡಲು ಆರಂಭಿಸಿದರು. ಈ ಟ್ರೆಂಡ್ ಇದೀಗ ಅಲ್ಲು ಅರ್ಜುನ್ ಅಭಿನಯದ ಇತ್ತೀಚೆಗಿನ ಹಿಟ್ ಚಿತ್ರ ಪುಷ್ಪ ಮೂಲಕವೂ ಕೂಡ ಮುಂದುವರಿದಿದೆ. ಇತ್ತೀಚೆಗಷ್ಟೇ ಪುಷ್ಪಾ ಚಿತ್ರದ ವೈರಲ್ ಡೈಲಾಗ್ ಆದ ತಗ್ಗೆದೆ ಲೇ ಎಂದು ಹೇಳಿದ್ದ ಡೇವಿಡ್ ವಾರ್ನರ್ ಇದೀಗ ಮತ್ತೊಮ್ಮೆ ಪುಷ್ಪ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಆದರೆ ಈ ಬಾರಿ ತೆಲುಗು ಅವತರಣಿಕೆಯ ಹಾಡಿಗೆ ಹೆಜ್ಜೆ ಹಾಕದ ಡೇವಿಡ್ ವಾರ್ನರ್ ಕನ್ನಡದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ.
ಇನ್ನು ಡೇವಿಡ್ ವಾರ್ನರ್ ಅವರ ಈ ವಿಡಿಯೋಗೆ ಈಗಾಗಲೇ 25 ಲಕ್ಷ ಮೆಚ್ಚುಗೆಗಳು ಬಂದಿದ್ದು, ಇನ್ ಸ್ಟಾಗ್ರಾಮ್ ತುಂಬಾ ಈ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಪುಷ್ಪ ಚಿತ್ರದ ನಟ ಅಲ್ಲು ಅರ್ಜುನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಡೇವಿಡ್ ವಾರ್ನರ್ ಅವರ ಈ ವಿಡಿಯೋಗೆ ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕನ್ನಡ ಅವತರಣಿಕೆಯ ಹಾಡಿಗೆ ಹೆಜ್ಜೆ ಹಾಕಿರುವ ಡೇವಿಡ್ ವಾರ್ನರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ವಾಗತಿಸುತ್ತಿದ್ದಾರೆ. ಹಾಗೂ ಇನ್ನೂ ಮುಂತಾದವರು ಕ್ರಿಕೆಟ್ ಜರ್ನಿ ಮುಗಿದ ನಂತರ ನೀವು ಸಿನಿಮಾಗೆ ಬನ್ನಿ, ಈಗಿರುವ ಎಲ್ಲಾ ನಾಯಕರನ್ನು ಹಿಂದಿಕ್ಕಿ ನೀವು ದೊಡ್ಡ ಸ್ಟಾರ್ ಆಗುತ್ತೀರ ಎಂದು ವಾರ್ನರ್ ಅವರ ಕಾಲೆಳೆಯುತ್ತಿದ್ದಾರೆ.