ನವದೆಹಲಿ, ಆಗಸ್ಟ್ 23: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವಿಕೆ ಬಗ್ಗೆ ಹೆಚ್ಚೆಚ್ಚು ಮಾಹಿತಿ ಹೊರ ಬೀಳುತ್ತಿದ್ದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.
ದಾವೂದ್ ಕರಾಚಿಯಲ್ಲಿ ನೆಲೆಸಿದ್ದರೆ, ನಾವು ಕ್ರಿಕೆಟ್ ಆಡಲು ಹೇಗೆ ಸಾಧ್ಯ? ಎಂದು ಬಿಸಿಸಿಐ ಕಾರ್ಯದರ್ಶಿ, ಸಂಸದ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಸದ್ಯಕ್ಕಂತೂ ಸಾಧ್ಯವೇ ಇಲ್ಲ ಎಂದು ಠಾಕೂರ್ ಸ್ಪಷ್ಟಪಡಿಸಿದ್ದಾರೆ. [ದಾವೂದ್ ಇಬ್ರಾಹಿಂ ಪಾಸ್ ಪೋರ್ಟ್ ವಿವರ ಬಹಿರಂಗ]

ಮಾಫಿಯಾ ಡಾನ್ ದಾವೂದ್ ಗೆ ನೆಲೆ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಲಿ, ಗಡಿ ಭಾಗದಲ್ಲಿ ಕಳ್ಳ ಯುದ್ಧ ನಡೆಸುವುದನ್ನು ನಿಲ್ಲಿಸಲಿ, ತಕ್ಷಣವೇ ಬಿಸಿಸಿಐವೇ ಕ್ರಿಕೆಟ್ ಸರಣಿ ಬಗ್ಗೆ ಪಿಸಿಬಿ ಜೊತೆ ಮಾತನಾಡಲಿದೆ ಎಂದು ಠಾಕೂರ್ ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡಲು ಭಾರತ ಮುಂದಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭವಾಗಿತ್ತು. [ಅವರು (ಕರಾಚಿ) ಮನೇಲಿದ್ದಾರೆ, ಮಲಗಿದ್ದಾರೆ : ದಾವೂದ್ ಹೆಂಡತಿ]
ಕರಾಚಿ, ಇಸ್ಲಾಮಾಬಾದಿನಲ್ಲಿ ದಾವೂದ್ ಸುಮಾರು 9 ಬಂಗಲೆಗಳನ್ನು ಹೊಂದಿದ್ದಾನೆ ಎಂಬ ಮಾಹಿತಿ ಹೊರಬಿದ್ದಿತ್ತು. ದಾವೂದ್ ಪತ್ನಿ ಕೂಡಾ ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ದಾವೂದ್ ಇಲ್ಲೇ ಮನೆಯಲ್ಲಿದ್ದಾರೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)