ದೇವಧರ್ ಟ್ರೋಫಿ 2023ನೇ ಆವೃತ್ತಿಗೆ ದಕ್ಷಿಣ ವಲಯ ತಮ್ಮ ತಂಡವನ್ನು ಪ್ರಕಟಿಸಿದೆ. ಮಯಾಂಕ್ ಅಗರ್ವಾಲ್ ಈ ತಂಡವನ್ನು ಮುನ್ನಡೆಸಲಿದ್ದು ಮುಂಬೈ ಇಂಡಿಯನ್ಸ್ ಆಟಗಾರ ಅರ್ಜುನ್ ತೆಂಡೂಲ್ಕರ್ ದಕ್ಷಿಣ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸುವ ಉತ್ತರ ವಲಯ ಮತ್ತು ಪಶ್ಚಿಮ ವಲಯದ ತಂಡಗಳನ್ನು ಈಗಾಗಲೇ ಪ್ರಕಟಿಸಲಾಗಿದೆ.
ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ರಣಜಿ ಟ್ರೋಫಿಯಲ್ಲಿ ಗೋವಾ ಮತ್ತು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದಾರೆ. ಈ ಮೂಲಕ ಇನ್ನೂ ಕೆಲ ಯುವ ಆಟಗಾರರ ಜೊತೆಗೆ ಅರ್ಜುನ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಂಡೂಲ್ಕರ್ ಗೋವಾ ಪರ ತಮ್ಮ ರಣಜಿ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದರು ಆದರೆ ನಂತರ ಬ್ಯಾಟ್ನಲ್ಲಿ ಹೆಚ್ಚು ಗಮನಸೆಳೆಯುವಲ್ಲಿ ವಿಫಲವಾಗಿದ್ದರು. 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅರ್ಜುನ್ ತೆಂಡೂಲ್ಕರ್ 223 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 7 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.

ಈ ತಂಡದಲ್ಲಿ ನಾಲ್ಕು ವೇಗಿಗಳು ಮತ್ತು ನಾಲ್ಕು ಸ್ಪಿನ್ನರ್ಗಳು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ಕುಮಾರ್ ಮತ್ತು ವಿ ಕೌಶಿಕ್ ವೇಗದ ಬೌಲರ್ಗಳಾಗಿ ತಂಡದಲ್ಲಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್ ಮತ್ತು ಸಾಯಿ ಕಿಶೋರ್ ಈ ತಂಡದಲ್ಲಿರುವ ನಾಲ್ವರು ಸ್ಪಿನ್ನರ್ಗಳಾಗಿದ್ದಾರೆ.
ಇನ್ನು ಇದಕ್ಕೂ ಮುನ್ನ ಉತ್ತರ ವಲಯ ಮತ್ತು ಪಶ್ಚಿಮ ವಲಯದ ತಂಡಗಳನ್ನು ಪ್ರಕಟಿಸಲಾಗಿತ್ತು. ಉತ್ತರ ವಲಯ ತಂಡದ ನಾಯಕತ್ವದ ಹೊಣೆಗಾರಿಕೆಯನ್ನು ನಿತೀಶ್ ರಾಣಾಗೆ ವಹಿಸಲಾಗಿದ್ದರೆ ಪ್ರಿಯಾಂಕ್ ಪಾಂಚಾಲ್ ಪಶ್ಚಿಮ ವಲಯವನ್ನು ಮುನ್ನಡೆಸಲಿದ್ದಾರೆ.
50 ಓವರ್ಗಳ ಈ ಪಂದ್ಯಾವಳಿಯಲ್ಲಿ ರಾಣಾ 15 ಸದಸ್ಯರ ಉತ್ತರ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಉತ್ತರ ವಲಯ ತಂಡದಲ್ಲಿ ಯುವ ಭಾರತೀಯ ಉದಯೋನ್ಮುಖ ಪ್ರತಿಭೆಗಳಾದ ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್, ನಿಶಾಂತ್ ಸಿಂಧು ಮತ್ತು ಹರ್ಷಿತ್ ರಾಣಾ ಮುಂತಾದವರಿಗೆ ಅವಕಾಶ ದೊರೆತಿದೆ. ಇನ್ನು ಪಶ್ಚಿಮ ವಲಯ ತಂಡದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ರಾಹುಲ್ ತ್ರಿಪಾಠಿ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ನ ಪೃಥ್ವಿ ಶಾ ಮತ್ತು ಚೆನ್ನೂ ಸೂಪರ್ ಕಿಂಗ್ಸ್ ತಂಡದ ಶಿವಂ ದುಬೆ ಇದ್ದಾರೆ.
ದಕ್ಷಿಣ ವಲಯ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಕುನ್ನುಮ್ಮಲ್ (ಉಪನಾಯಕ), ಎನ್ ಜಗದೀಶನ್ (ವಿಕೆಟ್ ಕೀಪರ್), ರೋಹಿತ್ ರಾಯಡು, ಕೆಬಿ ಅರುಣ್ ಕಾರ್ತಿಕ್, ದೇವದತ್ ಪಡಿಕ್ಕಲ್, ರಿಕಿ ಭುಯಿ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿ ಕಾವೇರಪ್ಪ, ವಿ ವೈಶಾಕ್, ಕೌಶಿಕ್ ವಿ, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್, ಅರ್ಜುನ್ ತೆಂಡೂಲ್ಕರ್, ಸಾಯಿ ಕಿಶೋರ್.