ನಾಲ್ಕನೇ ಆವೃತ್ತಿಯ ಮಹರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ದೇವದತ್ ಪಡಿಕ್ಕಲ್ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರನ್ನು ಹುಬ್ಬಳ್ಳಿ ಟೈಗಾರ್ಸ್ 13.20 ಲಕ್ಷ ರೂ. ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿದೆ. ಇನ್ನು ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಅಭಿನವ್ ಮನೋಹರ್, ಮನೀಷ್ ಪಾಂಡೆ ಅವರನ್ನು ಕೊಳ್ಳಲು ಮಾಲೀಕರು ಹಣ ಹೂಡಿದರು. ಇನ್ನು ಶಿವಮೊಗ್ಗ ಲಯನ್ಸ್ ವಿದ್ವತ್ ಕಾವೇರಪ್ಪ ಅವರಿಗೆ 10.80 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಬರಮಾಡಿಕೊಂಡಿತು. ಇನ್ನು ಬೆಂಗಳೂರು ಬ್ಲಾಸ್ಟರ್ಸ್ ವಿದ್ಯಾಧರ್ ಪಾಟಿಲ್ ಅವರಿಗೆ 8.30 ಕೋಟಿ ನೀಡಿದೆ.
ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗ ಸಮಿತ್ ಈ ಹರಾಜಿನಲ್ಲಿ ಸಿ ಕ್ಯಾಟಗಿರಿಯಲ್ಲಿ ಕಾಣಿಸಿಕೊಂಡರು. ಆದರೆ ಇವರನ್ನು ಕೊಳ್ಳಲು ಮಾಲೀಕರು ಮನಸ್ಸು ಮಾಡಲಿಲ್ಲ.

ಹುಬ್ಬಳ್ಳಿ ಟೈಗರ್ಸ್ ಹರಾಜಿನ ಅಂಗಳದಲ್ಲಿ ಗರಿಷ್ಠ ಮೊತ್ತದೊಂದಿಗೆ ಅಂಗಳಕ್ಕೆ ಇಳಿಯಿತು. ಈ ವೇಳೆ ಸ್ಟಾರ್ ಆಟಗಾರರಾದ ದೇವದತ್, ಅಭಿನವ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಸಫಲವಾಗಿದೆ. ಟಾಪ್ ಆರ್ಡರ್ನಲ್ಲಿ ತಂಡ ಮೊಹಮ್ಮದ್ ತಹಾ ಅವರಿಗೆ 4.60 ಲಕ್ಷ ನೀಡಿತು. ಉಳಿದಂತೆ ಹುಬ್ಬಳ್ಳಿ ಸಮರ್ಥ್ ನಟರಾಜನ್ ಅವರಿಗೆ 3.20 ಲಕ್ಷ ರೂ. ನೀಡಿದೆ.
ಮೈಸೂರು ವಾರಿಯರ್ಸ್ ಸ್ಟಾರ್ ಆಲ್ರೌಂಡರ್ಗಳಿಗೆ ಮಣೆ ಹಾಕಿದೆ. ಈ ತಂಡ ಕೆ ಗೌತಮ್ ಅವರನ್ನು 4.40 ಲಕ್ಷ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿದೆ. ಅಲ್ಲದೆ ಯಶೋವರ್ಧನ್ ಅವರಿಗೂ 2 ಲಕ್ಷ ನೀಡಿದ ಮೈಸೂರು ತಂಡವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆವರು ಹರಿಸಿದೆ. ಬ್ಯಾಟಿಂಗ್ ವಿಭಗವನ್ನು ಬಲಪಡಿಸಲು ತಂಡ ಮನೀಷ್ ಪಾಂಡೆ ಅವರನ್ನು 12.20 ಲಕ್ಷ ನೀಡಿ ಖರೀದಿಸಿದೆ.
ಶಿವಮೊಗ್ಗ ಲಯನ್ಸ್ ತಂಡ ಭರವಸೆಯ ಯುವ ಆಟಗಾರ ಅನೀಶ್ವರ್ ಗೌತಮ್ ಅವರಿಗೆ 8.20 ಲಕ್ಷ ರೂ. ನೀಡಿದೆ. ಅಲ್ಲದೆ ಈ ತಂಡ ಅನಿರುದ್ಧ ಜೋಶಿ (3.60 ಲಕ್ಷ) ಹಾಗೂ ದೀಪಕ್ ದೇವಾಡಿಗ (1.20 ಲಕ್ಷ) ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ದೇವದತ್ ಪಡಿಕ್ಕಲ್ - ₹13.20 ಲಕ್ಷ, ಹುಬ್ಬಳ್ಳಿ ಟೈಗರ್ಸ್
ಅಭಿನವ್ ಮನೋಹರ್ - ₹12.20 ಲಕ್ಷ, ಹುಬ್ಬಳ್ಳಿ ಟೈಗರ್ಸ್
ಮನೀಶ್ ಪಾಂಡೆ - ₹12.20 ಲಕ್ಷ, ಮೈಸೂರು ವಾರಿಯರ್ಸ್,
ವಿದ್ವತ್ ಕಾವೇರಪ್ಪ - ₹10.80 ಲಕ್ಷ , ಶಿವಮೊಗ್ಗ ಲಯನ್ಸ್
ವಿದ್ಯಾಧರ್ ಪಾಟೀಲ್ - ₹8.40 ಲಕ್ಷ, ಬೆಂಗಳೂರು ಬ್ಲಾಸ್ಟರ್ಸ್
ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿಗೆ ಭರದ ಸಿದ್ಧತೆಗಳು ನಡೆದಿವೆ. ಈ ಟೂರ್ನಿ ಆಗಸ್ಟ್ 11 ರಿಂದ ಆರಂಭವಾಗಲಿದೆ. ಈ ಟೂರ್ನಿ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಕರ್ನಾಟಕದ ಪ್ರತಿಭಾನ್ವಿತ ಆಟಗಾರರು ಭಾಗವಹಿಸಲಿದ್ದು, ಎಲ್ಲರ ಚಿತ್ತ ಕದ್ದಿದೆ.