ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಅನುಭವಿ ಆಟಗಾರ ಶಿಖರ್ ಧವನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ಮುಂದಿನ ಟಿ20 ವಿಶ್ವಕಪ್ನ ದೃಷ್ಟಿಯಿಂದ ನಾಯಕನಾಗಿದ್ದರೂ ಧವನ್ಗೆ ಈ ಪ್ರವಾಸ ಬಹಳ ಪ್ರಮುಖವಾಗಿದೆ. ಟೀಮ್ ಇಂಡಿಯಾ ಏಕದಿನ ತಂಡದ ಆರಂಭಿಕನಾಗಿದ್ದರೂ ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಮೊದಲ ಆಯ್ಕೆಯ ಆರಂಭಿಕರೆನಿಸಿದ್ದಾರೆ.
ಈ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಲಂಕಾ ಪ್ರವಾಸದಲ್ಲಿ ನಾಯಕನಾಗಿರುವ ಶಿಖರ್ ಧವನ್ ಈ ಸರಣಿಯಲ್ಲಿ ಉತ್ತಮ ರನ್ಗಳಿಸುವತ್ತ ಚಿತ್ತ ನೆಡಬೇಕಾಗಿದೆ. ಆಗ ಮಾತ್ರವೇ ಮುಂದಿನ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ಗಳಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ.
ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು
"ಟಿ20 ವಿಶ್ವಕಪ್ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿನ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳಬೇಕಿದೆ. ಯಾಕೆಂದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ತುಂಬಾ ಕಠಿಣವಾದ ಸ್ಪರ್ಧೆಯಿದೆ. ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರಂತಾ ಆಟಗಾರರು ಆರಂಭಿಕರಾಗಿ ನೆಲೆಯೂರಿದ್ದಾರೆ. ವಿರಾಟ್ ಕೊಹ್ಲಿ ಕೂಡ ತಾನು ಟಿ20 ಮಾದರಿಯಲ್ಲಿ ಇನ್ನಿಂಗ್ಸ್ ಆರಂಭಿಸುವುದಕ್ಕೆ ಉತ್ಸುಕನಾಗಿರುವುದಾಗಿ ನೇರವಾಗಿಯೇ ಹೇಳಿಕೊಂಡಿದ್ದಾರೆ" ಎಂದು ಲಕ್ಷ್ಮಣ್ ಶಿಖರ್ ಧವನ್ ಮುಂದಿರುವ ಸವಾಲನ್ನು ಹೇಳಿದ್ದಾರೆ.
"ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ಉತ್ತಮ ರನ್ಗಳಿಸಲೇಬೇಕಿದೆ. ಅವರು ಭಾರತ ತಂಡದ ನಾಯಕನಾಗಿರುವುದರಿಂದ ಸಾಕಷ್ಟು ಉತ್ಸುಕನಾಗಿರುತ್ತಾರೆ. ತಮ್ಮ ದೇಶದ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹಾಗಿದ್ದರೂ ಶಿಖರ್ ಧವನ್ ಚಿತ್ತ ಉತ್ತಮವಾಗಿ ರನ್ಗಳಿಸುವುದು ಹಾಗೂ ಟಿ20 ವಿಶ್ವಕಪ್ಗೆ ಸ್ಥಾನವನ್ನು ಸಂಪಾದಿಸುವುದಾಗಿದೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಧವನ್ ನೇತೃತ್ವದ 20 ಸದಸ್ಯರ ತಂಡ ಈಗಾಗಲೇ ಪ್ರವಾಸ ಕೈಗೊಂಡಿದೆ. 6 ಹೊಸ ಮುಖಗಳು ಈ ಪ್ರವಾಸಕ್ಕೆ ಆಯ್ಕೆಯಾಗಿದ್ದು ಶಿಖರ ಧವನ್ಗೆ ಇದು ನಾಯಕನಾಗಿ ಮೊದಲ ಅನುಭವವಾಗಿದೆ. ಈ ಪ್ರವಾಸದಲ್ಲಿ ನಾಯಕನಾಗಿ ಧವನ್ ಪ್ರದರ್ಶನ ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.