
ಬೆಂಗಳೂರು, ಮೇ 09: ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಆಲ್ರೌಂಡರ್ ಹಾಗೂ ದೇಶಕ್ಕೆ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್, ಟೀಮ್ ಇಂಡಿಯಾದ ಈಗಿನ ನಾಯಕ ಎಂ.ಎಸ್ ಧೋನಿ ಮತ್ತು ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎಂ.ಎಸ್ ಧೋನಿ ಅವರನ್ನು ಹಾಡಿ ಹೊಗಳಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿರುವ ಭಾರತ ತಂಡವು ಯುವ ಮತ್ತು ಅನುಭವಿ ಆಟಗಾರರ ಸಂಮಿಶ್ರಣ ಹೊಂದಿದೆ ಎಂದಿರುವ ಹರಿಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್, ಕೊಹ್ಲಿ ಮತ್ತು ಧೋನಿ ಅವರಿಗೆ ಸರಿಸಾಟಿಯಾದವರು ಯಾರೂ ಇಲ್ಲ ಎಂದಿದ್ದಾರೆ.
ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಮುಂಬರುವ ವಿಶ್ವಕಪ್ನಲ್ಲಿ ಸೆಮಿಫೈನಲ್ ವರೆಗೆ ಮುನ್ನಡೆಯಲಿದೆ ಎಂದು ಭವಿಷ್ಯ ನುಡಿದಿರುವ ಕಪಿಲ್ ದೇವ್, ಭಾರತ ತಂಡ ಉಪಾಂತ್ಯವನ್ನು ದಾಟಬೇಕಾದರೆ ಅದೃಷ್ಟದ ಜೊತೆಗೆ ದಿಟ್ಟ ಆಟವಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
"ಭಾರತ ತಂಡದಲ್ಲಿ ಅನುಭವ ಮತ್ತು ಯುವ ಪ್ರತಿಭೆಗಳ ಅತ್ಯುತ್ತಮ ಸಂಮ್ರಿಶ್ರಣವಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚು ಅನುಭವ ಭಾರತ ತಂಡದಲ್ಲಿದೆ. ನಾಲ್ಕು ವೇಗದ ಬೌಲರ್ಸ್, ಮೂವರು ಸ್ಪಿನ್ನರ್ಸ್ ಜತೆಗೆ ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ ಇರುವುದರಿಂದ ಪರಿಪೂರ್ಣ ಸಮತೋಲನ ತಂಡಕ್ಕಿದೆ,'' ಎಂದು ಕಪಿಲ್ ದೇವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಧೋನಿ ಮತ್ತು ಕೊಹ್ಲಿ ಭಾರತ ತಂಡಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರಿಬ್ಬರಿಗೆ ಸರಿಸಾಟಿ ಬೇರೆಯಾರೂ ಇಲ್ಲ. ವಿಶ್ವಕಪ್ನಲ್ಲಿ ಭಾರತ ತಂಡ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವುದಂತೂ ಖಂಡಿತಾ. ಆದರೆ ನಂತರದ ಹಾದಿ ಬಹಳ ಕಠಿಣ. ಸೆಮಿಫೈನಲ್ಸ್ ತಲುಪಿದ ಬಳಿಕ ಅದೃಷ್ಟದ ಜತೆಗೆ ಒಂದು ತಂಡವಾಗಿ ದಿಟ್ಟ ಪ್ರದರ್ಶನ ನೀಡಿದರೆ ಮುನ್ನುಗ್ಗಲು ಸಾಧ್ಯವಾಗುತ್ತದೆ,'' ಎಂದಿದ್ದಾರೆ.
60 ವರ್ಷದ ಕಪಿಲ್ ದೇವ್ ತಮ್ಮ ವೃತ್ತಿ ಜೀವನದಲ್ಲಿ ಭಾರತದ ಪರ ಶ್ರೇಷ್ಠ ಆಲ್ರೌಂಡರ್ ಆಗಿದ್ದವರು. ಅಲ್ಲದೆ 1983ರಲ್ಲಿ ತಮ್ಮ ನಾಯಕತ್ವದಲ್ಲಿ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಭಾರತ ತಂಡದ ಪರ 223 ಏಕದಿನ ಪಂದ್ಯಗಳನ್ನು ಆಡಿರುವ ಕಪಿಲ್, 253 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಮುಂಬರುವ ವಿಶ್ವಕಪ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ಜೂನ್ 5ರಂದು ದಿ ಓವಲ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.