
ಹೈದರಾಬಾದ್, ಏಪ್ರಿಲ್ 18: ಬೆನ್ನು ನೋವಿನಿಂದಾಗಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ವಿರುದ್ಧ ಏ.21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸಿಎಸ್ಕೆ ತಂಡದ ಹಂಗಾಮಿ ನಾಯಕ ಸುರೇಶ್ ರೈನಾ ಹೇಳಿದ್ದಾರೆ.
ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ
ಬುಧವಾರ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಎಂದಿನ ನಾಯಕ ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಸೂಪರ್ ಕಿಂಗ್ಸ್ ಆತಿಥೇಯ ಸನ್ ರೈಸರ್ಸ್ ಎದುರು 6 ವಿಕೆಟ್ಗಳ ಹೀನಾಯ ಸೋಲುಂಡಿತ್ತು. 2010ರ ಬಳಿಕ ಇದೇ ಮೊದಲ ಬಾರಿ ಸಿಎಸ್ಕೆ ಪರ ಕಣಕ್ಕಿಳಿಯುವಲ್ಲಿ ಧೋನಿ ವಿಫಲರಾಗಿದ್ದಾರೆ. ಅಂದಹಾಗೆ ಧೋನಿ ಅನುಪಸ್ಥಿತಿಯಲ್ಲಿ ಸಿಎಸ್ಕೆಆಡಿರುವ ಎಲ್ಲ ಪಂದ್ಯಗಳನ್ನು ಸೋತಿದೆ.
ಸಿಎಸ್ಕೆ ತಂಡವನ್ನು ಸತತ 121 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಧೋನಿ ಅವರದ್ದು. ಅವರ ಅನುಪಸ್ಥಿತಿಯಲ್ಲಿ ಸುರೇಶ್ ರೈನಾ ನಾಯಕನ ಜವಾಬ್ದಾರಿ ಪಡೆದಿದ್ದರು.
"ಧೋನಿ ಇದೀಗ ಚೇತರಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆ ಇದ್ದ ಕಾರಣ ವಿಶ್ರಾಂತಿ ಪಡೆದಿದ್ದರು. ಆರ್ಸಿಬಿ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ರೈನಾ ವಿವರಿಸಿದ್ದಾರೆ.
ಇನ್ನು ಸನ್ರೈಸರ್ಸ್ ವಿರುದ್ಧದ ಪಂದ್ಯ ಮುಗಿದ ನಂತರ ಹೈದರಾಬಾದ್ ಕ್ರೀಡಾಂಗಣದಲ್ಲಿ ಕೆಲ ಕಾಲ ಫುಟ್ಬಾಲ್ ಆಡಿದ ಧೋನಿ ತಮ್ಮ ಫಿಟ್ನೆಸ್ನಲ್ಲಿ ಯಾವುದೇ ತೊಂದರೆ ಇಲ್ಲವೆಂಬುದನ್ನು ಬಹಿರಂಗ ಪಡಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 5 ವಿಕೆಟ್ಗೆ 132 ರನ್ಗಳನ್ನು ಗಳಿಸಿದರೆ, ಗುರಿ ಬೆನ್ನತ್ತಿದ ರೈಸರ್ಸ್ ಇನ್ನು 19 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 137 ರನ್ಗಳನ್ನು ಚಚ್ಚಿ ಜಯ ತನ್ನದಾಗಿಸಿಕೊಂಡಿತು, ಈ ಮೂಲಕ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.