ಬೆಂಗಳೂರು, ಡಿ.30: ರಾಂಚಿಯ ರಾಜಕುಮಾರ, ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಅವರು ಸೋಮವಾರ ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದ ದಿನವೇ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದರು. ಅದರೆ, ಆ ಸುಳಿವು ಏಕದಿನ ಕ್ರಿಕೆಟ್ ನಿವೃತ್ತಿ ಬಗ್ಗೆ ಆಗಿತ್ತು. ಅದರೆ, ಟೆಸ್ಟ್ ಕ್ರಿಕೆಟ್ ನಿಂದ ಧೋನಿ ರಿಟೈರ್ ಆಗಿದ್ದು ನಿರೀಕ್ಷಿತವಾದರೂ ರಿಟೈರ್ ಆದ ರೀತಿ ಹಲವರ ಹುಬ್ಬೇರಿಸಿದೆ. ಈ ಬಗ್ಗೆ ಎಬಿಪಿ ನ್ಯೂಸ್ ಜೊತೆ ಧೋನಿ ಅವರ ಕೋಚ್ ಹೇಳಿದ್ದೇನು ಮುಂದೆ ಓದಿ...
ಮುಂದಿನ ವಿಶ್ವಕಪ್ ನಂತರ ನಿವೃತ್ತಿಯಾಗುವ ಬಗ್ಗೆ ಧೋನಿ ಸುಳಿವು ನೀಡಿದ್ದರು. ಅದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಸತತವಾಗಿ ತಮ್ಮ ನಾಯಕತ್ವದಲ್ಲಿ ತಂಡ ಸೋಲು ಕಂಡರೂ ನಾಯಕತ್ವ ಪಟ್ಟದಿಂದ ಕೆಳಗಿಳಿದಿರಲಿಲ್ಲ. ಗಾಯ ಸಮಸ್ಯೆಯಿಂದ ಆಸ್ಟ್ರೇಲಿಯಾ ಸರಣಿ ಆರಂಭದಲ್ಲಿ ತಂಡವನ್ನು ಮುನ್ನಡೆಸದೆ ಹಿಂದೆ ಉಳಿದಿದ್ದ ಧೋನಿ ಅದಕ್ಕೂ ಮುನ್ನ ಭಾರತದಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. [ಧೋನಿ ನಿವೃತ್ತಿ : ಯಾರು ಏನು ಟ್ವೀಟ್ ಮಾಡಿದ್ರು?]
ವಿದೇಶದಲ್ಲಿ ಮಾತ್ರ 2011ರಿಂದ ಒಂದು ಸರಣಿಯನ್ನೂ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದಿಲ್ಲ. ಇದೆಲ್ಲದರ ಅರಿವು ಧೋನಿಗಿತ್ತು. ಅದರೆ, ಇತ್ತೀಚೆಗೆ ತಂಡದಲ್ಲಿ ಆಗುತ್ತಿರುವ ಬೆಳವಣಿಗೆ ಕಿತ್ತಾಟ, ವೈಯಕ್ತಿಕ ದ್ವೇಷ ಅವರನ್ನು ಬಾಧಿಸುತ್ತಿತ್ತು. ಬಹುಶಃ ಕೊನೆ ಟೆಸ್ಟ್ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಲು ಇದೇ ಕಾರಣವಿರಬಹುದು ಎಂದು ಧೋನಿ ಅವರ ಕೋಚ್ ಚಂಚಲ್ ಭಟ್ಟಾಚಾರ್ಯ ಹೇಳಿದ್ದಾರೆ.
ಅದರೆ, ಏಕದಿನ, ಟಿ20 ಹಾಗೂ ಟೆಸ್ಟ್ ಮೂರು ಮಾದರಿಯನ್ನು ಸಂಭಾಳಿಸುವುದು ಕಷ್ಟವಾಗುತ್ತಿದೆ ಎಂದು ಧೋನಿ ತಕ್ಷಣಕ್ಕೆ ಕಾರಣ ನೀಡಿದ್ದಾರೆ.

ಧೋನಿ ನಿರ್ಧಾರ ಸರಿಯಾಗಿದೆ: ಸಿಡ್ನಿ ಟೆಸ್ಟ್ ಆಡಿದ ಮೇಲೆ ನಿರ್ಣಯ ಘೋಷಿಸಬಹುದಿತ್ತು. ಅದರೆ, ಮುಂಚಿತವಾಗಿ ಸುದ್ದಿಯನ್ನು ಬಿಸಿಸಿಐ ಪ್ರಕಟಿಸಿದೆ. ಜಾರ್ಖಂಡ್ ನ ಯುವಕನೊಬ್ಬ ದೇಶದ ತಂಡವನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಥಾನಕ್ಕೇರಿಸಿದ್ದು ಕಡಿಮೆ ಸಾಧನೆಯಲ್ಲ. ಧೋನಿ ಇರುವಷ್ಟು ಕಾಲ ಅನೇಕ ಯುವ ಆಟಗಾರರಿಗೆ ಸ್ಪೂರ್ತಿ ತುಂಬಿದ್ದಾರೆ. ಜಾರ್ಖಂಡ್ ನಂಥ ನಗರದಿಂದಲೂ ಅದ್ಭುತ ಪ್ರತಿಭೆಗಳು ಹೊರ ಬರಬಹುದು ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. [ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಧೋನಿ]
ತಂಡದ ಬಗ್ಗೆ ಅಸಮಾಧಾನ: ಧೋನಿ ತನ್ನ ಭಾವನೆಗಳನ್ನು ಬೇರೆಯವರ ಮೇಲೆ ಹೇರುವುದಿಲ್ಲ. ಅದರೆ, ಇತ್ತೀಚೆಗೆ ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ ಕೆಲ ಘಟನೆಗಳು ಆತನ ಮನಸ್ಸನ್ನು ಘಾಸಿಗೊಳಿಸಿದ್ದಂತೂ ನಿಜ. ಮೆರ್ಲ್ಬೋರ್ನ್ ಟೆಸ್ಟ್ ಡ್ರಾ ಮಾಡಿಕೊಳ್ಳಲು ಧೋನಿ ಶ್ರಮಿಸಿದ. ನಿವೃತ್ತಿ ಘೋಷಿಸಲು ಸರಿಯಾದ ಸಮಯವಾಗಿದೆ ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಕೀನ್ಯಾಕ್ಕೆ ತೆರಳಿದ ಅಂಡರ್ 19 ತಂಡದಿಂದ ಧೋನಿಯನ್ನು ಹೊರಹಾಕಲಾಗಿತ್ತು. ಅದರೂ ಛಲ ಬಿಡದೆ ಕೇವಲ ಪ್ರತಿಭೆ ಮೂಲಕ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಲ್ಲದೆ ನಾಯಕನಾಗಿ ಮುನ್ನಡೆಸಿದ್ದು ಈಗ ಇತಿಹಾಸ. [ಡ್ರೆಸಿಂಗ್ ರೂಂನಲ್ಲಿ ಧವನ್ - ಕೊಹ್ಲಿ ಫೈಟ್..?]
ಐಪಿಎಲ್ ಹಗರಣ: ಮುದ್ಗಲ್ ವರದಿಯಲ್ಲಿ ಧೋನಿ ಹೆಸರಿದೆ. ಐಪಿಎಲ್ ವಂಚನೆಯಲ್ಲಿ ಧೋನಿ ಕೂಡಾ ಭಾಗಿ ಎಂಬ ಸುದ್ದಿಗಳು ಧೋನಿಯನ್ನು ಕಾಡಿಸಿತ್ತು. ಈ ಬಗ್ಗೆ ನನ್ನ ಬಳಿ ಕೂಡಾ ದುಃಖ ತೋಡಿಕೊಂಡಿದ್ದ. ಆದರೆ, ಧೋನಿಗೆ ಕ್ರಿಕೆಟ್ ಬಗ್ಗೆ ವ್ಯಾಮೋಹ ಮಾತ್ರ ಕಡಿಮೆಯಾಗಿರಲಿಲ್ಲ. ಆತನ ಫಿಟ್ನೆಸ್ ಹಾಗೂ ಆಸಕ್ತಿ, ಸತತ ಪರಿಶ್ರಮ ಆತನನ್ನು ಯಶಸ್ವಿ ನಾಯಕನಾಗಿ ಮಾಡಿದೆ.
ಧೋನಿ ಇಲ್ಲದೆ ಟೀಂ ಇಂಡಿಯಾಗೆ ಕಷ್ಟ: ವೃದ್ಧಿಮಾನ್ ಸಹಾ, ನಮನ್ ಓಝಾ ಮುಂತಾದ ವಿಕೆಟ್ ಕೀಪರ್ ಗಳಿರಬಹುದು, ನಾಯಕನಾಗಿ ಕೊಹ್ಲಿ ಇರಬಹುದು ಟೀಂ ಇಂಡಿಯಾಕ್ಕೆ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಧೋನಿ ಅನುಪಸ್ಥಿತಿ ಕಾಡಲಿದೆ ಎಂದು ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.