ಶನಿವಾರ, ಸೆಪ್ಟೆಂಬರ್ 1ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾಗಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಜಿದ್ದಾಜಿದ್ದಿನ ಪಂದ್ಯದಲ್ಲಿ ಸೆಣಸಾಡುತ್ತಿದ್ದು, ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಭಾರತ ತಂಡದ ಅಗ್ರ ಕ್ರಮಾಂಕ ಎಡವಿದೆ. ತಂಡದ ಮೊತ್ತ 70 ರನ್ಗಳಾಗುಷ್ಟರಲ್ಲಿ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಭಾರತ ತಂಡದ ನಾಯಕ ಹಾಗೂ ಆರಂಭಿಕ ರೋಹಿತ್ ಶರ್ಮಾ 22 ಎಸೆತಗಳಲ್ಲಿ 11 ರನ್ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಅತ್ಯಂತ ಕಳಪೆಯಾಗಿ ಬೌಲ್ಡ್ ಆದರು.

ನಂತರ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 1 ಬೌಂಡರಿ ಗಳಿಸಿ ಅದೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಪ್ರಮುಖ ಬ್ಯಾಟರ್ಗಳೇ ಕಳಪೆಯಾಗಿ ಔಟಾಗಿದ್ದು, ಇದು ತಂಡದ ರನ್ ವೇಗಕ್ಕೆ ಕಡಿವಾಣ ಬಿದ್ದಿದೆ.
ಇನ್ನು ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಕ್ರೀಸ್ನಲ್ಲಿ ಉಳಿಯದೇ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ 10ನೇ ಓವರ್ನಲ್ಲಿ ಫಖರ್ ಜಮಾನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಶ್ರೇಯಸ್ ಅಯ್ಯರ್ 9 ಎಸೆತಗಳಲ್ಲಿ 14 ರನ್ ನೀಡಿ ನಿರಾಸೆ ಮೂಡಿಸಿದರು.
ಆರಂಭಿಕ ಶುಭ್ಮನ್ ಗಿಲ್ 32 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.
ಇನ್ನು ಶನಿವಾರದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಳಪೆಯಾಗಿ ಔಟಾದ ರೋಹಿತ್ ಶರ್ಮಾ ಅವರು ಕ್ಷಮೆ ಕೇಳಿದರಾ ಎಂದು ಎಲ್ಲರನ್ನೂ ಕಾಡುತ್ತಿದೆ. ರೋಹಿತ್ ಶರ್ಮಾ ಅವರ ಹಳೆಯ ಟ್ವೀಟೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
2010 ಏಪ್ರಿಲ್ 23ರಂದು ರೋಹಿತ್ ಶರ್ಮಾ ಅವರು ಕಳಪೆ ಶಾಟ್ಗೆ ಔಟಾಗಿದ್ದಕ್ಕೆ ಕ್ಷಮೆ ಕೇಳಿದ್ದರು. ಇದೀಗ ಅದು ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
"ಎಲ್ಲರಿಗೂ ನಮಸ್ಕಾರ. ನನಗೆ ಗೊತ್ತು ಇಂದು ನಾನು ಹಲವರನ್ನು ನಿರಾಶೆಗೊಳಿಸಿದ್ದೇನೆ. ಆ ಕಳಪೆ ಶಾಟ್ಗೆ ನನ್ನನ್ನು ದೂಷಿಸಲಾಗಿದೆ, ಮತ್ತೊಮ್ಮೆ ಕ್ಷಮಿಸಿ ಗಯ್ಸ್," ಎಂದು ಹೇಳಿದ್ದರು.
ಸದ್ಯ ಭಾರತ ತಂಡ 22 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದ್ದು, ಕ್ರೀಸ್ನಲ್ಲಿ ಇಶಾನ್ ಕಿಶನ್ 40 ರನ್ ಮತ್ತು ಹಾರ್ದಿಕ್ ಪಾಂಡ್ಯ 20 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ.