
ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಅಬ್ಬರಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಮನರಂಜನೆ ಪಡೆಯುತ್ತಿದ್ದರೆ ಮತ್ತೊಂದೆಡೆ ಐಪಿಎಲ್ ಟೂರ್ನಿಯ ಆರಂಭಕ್ಕೂ ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಅನುಭವಿ ಆಟಗಾರ ಹಾಗೂ ಆರ್ಸಿಬಿ ತಂಡದ ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಬಗೆಗಿನ ಒಂದು ಕುತೂಹಲಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಸದ್ಯ ಸ್ಟಾರ್ ಆಟಗಾರರ ಪೈಕಿ ಒಬ್ಬರೆನಿಸಿರುವ ಮೊಹಮ್ಮದ್ ಸಿರಾಜ್ ಬಗ್ಗೆ ದಿನೇಶ್ ಕಾರ್ತಿಕ್ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾದ ಮೂರು ಮಾದರಿಯಲ್ಲಿಯೂ ಪ್ರಮುಖ ಆಟಗಾರನಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಳೆದ ಆಟಗಾರ. ಆದರೆ ಆರಂಭಿಕ ಹಂತದಲ್ಲಿ ಸಿರಾಜ್ ಸಾಕಷ್ಟು ರನ್ಗಳನ್ನು ಬಿಟ್ಟುಕೊಡುತ್ತಿದ್ದರು. ಆ ಹಂತದಲ್ಲಿ ವಿರಾಟ್ ಕೊಹ್ಲಿ ಸಿರಾಜ್ ಅವರಿಗೆ ಅಣ್ಣನ ರೀತಿ ಬೆಂಬಲವಾಗಿ ನಿಂತರು ಎಂದಿದ್ದಾರೆ ದಿನೇಶ್ ಕಾರ್ತಿಕ್.
ಸಿರಾಜ್ ಅವರು ವಿರಾಟ್ ಕೊಹ್ಲಿಯನ್ನು ಅಣ್ಣನಂತೆಯೇ ನೋಡುತ್ತಾರೆ ಎಂದಿರುವ ದಿನೇಶ್ ಕಾರ್ತಿಕ್ ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಅವರನ್ನು ಕೂಡ ವಿಶೇಷವಾಗಿ ಗೌರವದಿಂದ ಕಾಣುತ್ತಾರೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಆರ್ಸಿಬಿ ತಂಡದಲ್ಲಿ ಮೊಹಮ್ಮದ್ ಸಿರಾಜ್ ಉಳಿದುಕೊಳ್ಳಲು ವಿರಾಟ್ ಕೊಹ್ಲಿಯೇ ಕಾರಣ ಎಂದಿದ್ದಾರೆ ದಿನೇಶ್ ಕಾರ್ತಿಕ್. ಕ್ರಿಕ್ಬಜ್ಗೆ ನೀಡಿರುವ ಸಂದರ್ಶನದಲ್ಲಿ ದಿನೇಶ್ ಕಾರ್ತಿಕ್ ಕುತೂಹಲಕಾರಿ ಅಂಶವನ್ನು ವಿವರಿಸಿದ್ದಾರೆ.
"ಸಿರಾಜ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಆರ್ಸಿಬಿಗೆ ಸೇರ್ಪಡೆಯಾದರು. ಹಾಗಾಗಿ ವಿರಾಟ್ ಕೊಹ್ಲಿಯ ಮೇಲೆ ಸಿರಾಜ್ಗೆ ವಿಶೇಷವಾದ ಗೌರವವಿದ್ದು ಜೀವನದ ಬಹಳ ಮುಖ್ಯ ವಿಕ್ತಿಯನ್ನಾಡಿ ಕೊಹ್ಲಿಯನ್ನು ಕಾಣುತ್ತಾರೆ. ಸಿರಾಜ್ ಇಬ್ಬರು ವ್ಯಕ್ತಗಳನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅದೆಂದರೆ ವಿರಾಟ್ ಕೊಹ್ಲಿ ಹಾಗೂ ಭರತ್ ಅರುಣ್. ಹೈದರಾಬಾದ್ನಲ್ಲಿ ವೃತ್ತಿಜೀವನದ ಆರಂಭದಲ್ಲಿ ಕೋಚ್ ಆಗಿ ಭರತ್ ಅರುಣ್ ಸಿರಾಜ್ ಕ್ರಿಕೆಟ್ ಬದುಕಿನ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿದ್ದರು. ಉನ್ನತ ಮಟ್ಟದ ಸಾಧನೆಯತ್ತ ಹೆಜ್ಜೆಯಿಡಲು ಅವರು ಪ್ರಮುಖ ಕಾರಣವಾಗಿದ್ದರು. ಈ ಮೂಲಕ ಸಿರಾಜ್ ಜೀವನದಲ್ಲಿ ಭರತ್ ಅರುಣ್ ಪಾತ್ರ ಮಹತ್ವದ್ದಾಗಿದೆ. ಇನ್ನು ವಿರಾಟ್ ಕೊಹ್ಲಿ ನಾಯಕನಾಗಿ ಸಿರಾಜ್ ಜೀವನದಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
"2020ರಲ್ಲಿ ಕೋವಿಡ್ ಬಳಿಕ ಸಿರಾಜ್ ಬಹಳ ಅದ್ಭುತವಾಗಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಅದಕ್ಕೂ ಮುನ್ನ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಆಗ ವಿರಾಟ್ ಕೊಹ್ಲಿ ಸಿರಾಜ್ ಬೆಂಬಲಕ್ಕೆ ನಿಂತು 'ಆತ ನನಗೆ ಆಡುವ ಬಳಗದಲ್ಲಿ ಬೇಕೇ ಬೇಕು' ಎಂದು ಬೇಡಿಕೆಯಿಟ್ಟು ಉಳಿಸಿಕೊಂಡಿದ್ದರು. ನಾನು ಕೆಕೆಆರ್ನಲ್ಲಿದ್ದಾಗ ನಮ್ಮನ್ನು 100ಕ್ಕೂ ಕಡಿಮೆ ರನ್ಗಳಿಗೆ ಔಟಾಗುವಂತೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು ಮೂರು ವಿಕೆಟ್ ಪಡೆದುಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು"
"ಅಲ್ಲಿಂದ ಸಿರಾಜ್ ಅವರ ಟಿ20 ವೃತ್ತಿ ಜೀವನ ಅದ್ಭುತವಾಗಿ ಪ್ರಗತಿ ಕಾಣಲು ಆರಂಭಿಸಿತ್ತು. ಅವರು ಬಹಳ ಅದ್ಭುತವಾಗಿ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಬಹಳ ಕಠಿಣ ಜೀವನದಲ್ಲಿಯೂ ಆತ್ಮವಿಶ್ವಾಸದಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೇರುವುದನ್ನು ನೋಡಿದಾಗ ಬಹಳ ಸಂತಸವಾಗುತ್ತದೆ. ಆತನದ್ದು ಬಹಳ ಅದ್ಭುತವಾದ ಸ್ಪೂರ್ತಿಯ ಕಥೆ. ಬಹಳಷ್ಟು ಜನರಿಗೆ ಆತ ಸ್ಪೂರ್ತಿಯಾಗಬಲ್ಲ" ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್.