ದ.ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಗೆಲ್ಲಲು ಈ ಇಬ್ಬರಲ್ಲಿ ಒಬ್ಬನನ್ನು ತಂಡದಿಂದ ಹೊರಗಿಡಿ: ಡಿಕೆ

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಮೊದಲನೇ ಪಂದ್ಯ ಈಗಾಗಲೇ ಮುಗಿದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 31 ರನ್ಗಳ ಹೀನಾಯ ಸೋಲನ್ನು ಅನುಭವಿಸುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಪಂದ್ಯದಲ್ಲಿ ಸೋಲುವುದರ ಮೂಲಕ ಇಕ್ಕಟ್ಟಿಗೆ ಸಿಲುಕಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ ಉಳಿದೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.
ಹೌದು, ಟೀಮ್ ಇಂಡಿಯಾ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಸರಣಿ ಸೋಲುವುದರ ಮೂಲಕ ಈಗಾಗಲೇ ಮುಖಭಂಗಕ್ಕೊಳಗಾಗಿದೆ. ಅದರ ಬೆನ್ನಲ್ಲೇ ಇದೀಗ ಏಕದಿನ ಸರಣಿಯ ಚೊಚ್ಚಲ ಪಂದ್ಯವನ್ನು ಕೂಡ ಸೋತಿರುವ ಟೀಂ ಇಂಡಿಯಾ ಉಳಿದೆರಡು ಪಂದ್ಯಗಳನ್ನು ಗೆದ್ದು ಟೆಸ್ಟ್ ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳುವುದರ ಜೊತೆಗೆ ಏಕದಿನ ಸರಣಿಯ ಸೋಲನ್ನು ತಡೆಯಬೇಕಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.
ಈ ಕುರಿತಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಗಳು ನಡೆಯುತ್ತಿದ್ದು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಜಯ ಸಾಧಿಸಬೇಕೆಂದರೆ ತಂಡದಿಂದ ಯಾವ ಆಟಗಾರನನ್ನು ಕೈಬಿಡಬೇಕು ಹಾಗೂ ಇತರೆ ಯಾವ ಆಟಗಾರರಿಗೆ ಸ್ಥಾನ ನೀಡಬೇಕು ಎಂಬ ಅಭಿಪ್ರಾಯಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ತಂಡದಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ದಿನೇಶ್ ಕಾರ್ತಿಕ್ ಕೂಡ ಪ್ರತಿಕ್ರಿಯಿಸಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡದಲ್ಲಿ ಈ ಕೆಳಕಂಡ ಬದಲಾವಣೆಯಾಗಬೇಕು ಎಂದಿದ್ದಾರೆ.

ಈ ಇಬ್ಬರಲ್ಲಿ ಒಬ್ಬನನ್ನು ತಂಡದಿಂದ ಕೈಬಿಡಬೇಕು ಎಂದ ದಿನೇಶ್ ಕಾರ್ತಿಕ್
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾದಿಂದ ವೇಗದ ಬೌಲರ್ಗಳಾದ ಭುವನೇಶ್ವರ್ ಕುಮಾರ್ ಅಥವಾ ಜಸ್ಪ್ರೀತ್ ಬುಮ್ರಾ ಈ ಇಬ್ಬರಲ್ಲಿ ಒಬ್ಬರನ್ನು ಕೈಬಿಡಬೇಕು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ. ಟೀಮ್ ಇಂಡಿಯಾಗೆ ವೇಗದ ಆಕ್ರಮಣ ಮಾಡುವ ಬೌಲರ್ಗಳ ಅಗತ್ಯವಿರುವುದರಿಂದ ಈ ಇಬ್ಬರಲ್ಲಿ ಒಬ್ಬನನ್ನು ತಂಡದಿಂದ ಕೈಬಿಡಬೇಕು ಎಂದಿದ್ದಾರೆ.

ಪ್ರಸಿದ್ಧ್ ಕೃಷ್ಣ ಅಥವಾ ಮೊಹಮ್ಮದ್ ಸಿರಾಜ್ ತಂಡಕ್ಕೆ ಬೇಕು
ಹೀಗೆ ಜಸ್ಪ್ರೀತ್ ಬುಮ್ರಾ ಅಥವಾ ಭುವನೇಶ್ವರ್ ಕುಮಾರ್ ಈ ಇಬ್ಬರಲ್ಲಿ ಒಬ್ಬರನ್ನು ತಂಡದಿಂದ ಹೊರಗಿಡಬೇಕು ಎಂದಿರುವ ದಿನೇಶ್ ಕಾರ್ತಿಕ್ ಆ ಆಟಗಾರನ ಜಾಗಕ್ಕೆ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಈ ಇಬ್ಬರು ವೇಗದ ಎಸೆತಗಳ ಆಕ್ರಮಣ ಮಾಡಬಲ್ಲಂಥ ವೇಗಿಗಳಾಗಿರುವುದರಿಂದ ಪಂದ್ಯದ ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆದು ಎದುರಾಳಿಗಳ ಮೇಲೆ ಒತ್ತಡ ಹೇರಬಲ್ಲರು ಎಂದು ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಥಮ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆದದ್ದು ಇಬ್ಬರು ಬೌಲರ್ಗಳು ಮಾತ್ರ
ಮೊದಲನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ಗಳನ್ನು ಕಳೆದುಕೊಂಡಿತು. ಈ ಪೈಕಿ ಏಡನ್ ಮರ್ಕ್ರಮ್ ಅವರನ್ನು ವೆಂಕಟೇಶ್ ಅಯ್ಯರ್ ರನ್ ಔಟ್ ಮಾಡಿದರೆ, ಇನ್ನುಳಿದ 3 ವಿಕೆಟ್ಗಳ ಪೈಕಿ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಹೀಗೆ ಈ ಇಬ್ಬರು ಬೌಲರ್ಗಳನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಉಳಿದ ಬೌಲರ್ಗಳಾದ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಹಾಗೂ ಯುಜ್ವೇಂದ್ರ ಚಹಾಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications