ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಚುಟುಕು ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಅನಿರೀಕ್ಷಿತ ವೈಫಲ್ಯ ಕಂಡಿದ್ದು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ತಂಡದ ಈ ಸತತ ಸೋಲಿಗೆ ಕಾರಣಗಳು ಏನು ಎಂಬುದರ ವಿಶ್ಲೇಷಣೆಗಳು ಕೂಡ ನಡೆಯುತ್ತಿದ್ದು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದಕ್ಕೂ ಕೋಚ್ ರಾಹುಲ್ ದ್ರಾವುಡ್ ಅವರತ್ತ ಬೊಟ್ಟುಮಾಡುವುದು ಸರಿಯಲ್ಲ ಎಂದಿರುವ ದೊಡ್ಡ ಗಣೇಶ್ ಈ ರೀತಿಯ ಟೀಕೆಗಳನ್ನು ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

"ಪ್ರತೊಯೊಂದು ವಿಚಾರಕ್ಕೂ ರಾಹುಲ್ ದ್ರಾವಿಡ್ ಅವರನ್ನೇ ಬೊಟ್ಟು ಮಾಡುವುದನ್ನು ನಿಲ್ಲಿಸಿ. ಬೌಲರ್ಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಅವರ ಪಾತ್ರ ಯಾವುದೂ ಇಲ್ಲ. ಅವರು ಮಾಧ್ಯಮಗಳ ಮುಂದೆ ಹೆಚ್ಚಾಗಿ ಮಾತನಾಡುವುದಿಲ್ಲ ಎನ್ನುವ ಕಾರಣಕ್ಕೆ ಸುಲಭವಾಗಿ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ" ಎಂದು ಟ್ವೀಟ್ನಲ್ಲಿ ದೊಡ್ಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಕದಿನ ವಿಶ್ವಕಪ್ಗೆ ಸಿದ್ಧತೆ ಮಾಡುತ್ತಿರುವ ಈ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ಸಾಕಷ್ಟು ಟೀಕೆಗಳನ್ನು ಎದಿರಿಸುತ್ತಿದ್ದಾರೆ. ಇತ್ತೀಚೆಗೆ ಅಂತ್ಯವಾಗಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸೋಲು ಕಂಡಾಗ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ ವಿಚಾರವಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಲ ಅಭಿಮಾನಿಗಳಿ ಕೋಚ್ ದ್ರಾವಿಡ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಒತ್ತಾಯವನ್ನು ಕುಡ ಮಾಡಿದ್ದರು.
ಇದೀಗ ಟಿ20 ಸರಣಿಯಲ್ಲಿ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಆರು ಮಂದಿ ಬೌಲರ್ಗಳೊಂದಿಗೆ ಕಣಕ್ಕೀಳಿಯುವ ನಿರ್ಧಾರದ ಬಗ್ಗೆಯೂ ಸಾಕಷ್ಟ ಟೀಕೆಗಳು ಕೇಳಿ ಬಂದಿದೆ. ಅದರ ಜೊತೆಗೆ ಅಕ್ಷರ್ ಪಟೇಲ್ ಬೌಲರ್ ಆಗಿ ತಂಡದಲ್ಲಿದ್ದರೂ ಅವರಿಗೆ ಒಂದೇ ಒಂದು ಓವರ್ ಬೌಲಿಂಗ್ ನಡೆಸುವ ಅವಕಾಶವೂ ನೀಡದ ಬಗ್ಗೆಯೂ ಪ್ರಶ್ನೆಗಳು ಏಳುತ್ತಿವೆ. ಇನ್ನು ತಂಡದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು 16ನೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಪಡೆದರು ಕೂಡ ನಂತರ ಅವರಿಗೆ ಅವಕಾಶ ನೀಡದ ಬಗ್ಗೆಯೂ ಕೋಚ್ ದ್ರಾವಡಿ್ ವಿರುದ್ಧವೇ ಪ್ರಶ್ನೆಗಳ ಬಾಣಗಳು ನುಗ್ಗುತ್ತಿದೆ.
ಈ ಹಿನ್ನೆಲೆಯಲ್ಲಿ ದೊಡ್ಡ ಗಣೇಶ್ ಅವರು ಬೌಲಿಂಗ್ ಬದಲಾವಣೆ ಮಾಡುವ ವಿಚಾರದಲ್ಲಿ ಕೋಚ್ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್ಗಳ ಅಂತರದ ಸೋಲು ಅನುಭವಿಸಿದ್ದು ಸರಣಿಯಲ್ಲಿ 0-2 ಅಂತರದ ಹಿನ್ನಡೆ ಅನುಭವಿಸಿದೆ.
ಇನ್ನು ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿಯಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಕಳೆದ ವರ್ಷದ ಏಷ್ಯಾ ಕಪ್ನಲ್ಲಿ ಭಾರತ ಲೀಗ್ ಹಂತದಿಂದಲೇ ಹೊರಬಿದ್ದ ಬಳಿಕ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೊತು ನಿರ್ಗಮಿಸಿತ್ತು. ಅದಾದ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿಯೂ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿ ನಿರಾಸೆ ಅನುಭವಿಸಿತ್ತು. ಈ ಮೂಲಕ ಭಾರತದ ಐಸಿಸಿ ಟ್ರೋಫಿ ಗೆಲ್ಲುವ ಕನಸು ಮತ್ತಷ್ಟಯ ಮುಂದೆ ಹೋದಂತಾಗಿದೆ.