ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಭಾರತ ತಂಡ ಸೂಪರ್ 4 ಹಂತಕ್ಕೆ ಈಗಾಗಲೇ ಲಗ್ಗೆಯಿಟ್ಟಿದೆ. ಲೀಗ್ ಹಂತದಲ್ಲಿ ಮಳೆ ಅಡ್ಡಿಯುಂಟು ಮಾಡಿದ್ದರೂ ಸಿಕ್ಕ ಅವಕಾಶವನ್ನು ಭಾರತ ತಂಡ ನಿರೀಕ್ಷಿತ ಮಟ್ಟದಲ್ಲಿ ಬಳಸಿಕೊಳ್ಳಲು ವಿಫಲವಾಗಿತ್ತು. ಇದೀಗ ಸೂಪರ್ 4 ಹಂತದಲ್ಲಿ ಭಾರತದಿಂದ ಸಂಘಟಿತ ಪ್ರದರ್ಶಣದ ನಿರೀಕ್ಷೆಯಲ್ಲಿದ್ದಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು. ವಿಶ್ವಕಪ್ ಟೂರ್ನಿ ಅತ್ಯಂತ ಸನಿಹದಲ್ಲಿರುವಾಗ ತಂಡವಾಗಿ ನೀಡುವ ಪ್ರದರ್ಶನ ಆತ್ಮಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನುವುದು ಸ್ಪಷ್ಟ.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಭಾರತವೇ ಆಯೋಜನೆ ಮಾಡುತ್ತಿರುವಾಗ ಸಹಜವಾಗಿಯೇ ಭಾರತ ತಂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. 2011ರಲ್ಲಿ ಭಾರತದ ಸಹ ಆತಿಥ್ಯದಲ್ಲಿ ನಡೆದಿದ್ದಾಗ ಭಾರತ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಇದೀಗ ಮತ್ತೊಮ್ಮೆ ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ.

ವಿಶ್ವಕಪ್ಗೆ ಪ್ರಕಟಿಸಿರುವ ಭಾರತ ತಂಡ ಬಲಿಷ್ಠವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಹುತೇಕ ಪೂರ್ಣಪ್ರಮಾಣದ ಆಟಗಾರರ ಪಡೆಯನ್ನು ಹೊಂದಿದ್ದು ಬಲಾಢ್ಯ ಆಟಗಾರರು ತಂಡದಲ್ಲಿದ್ದಾರೆ. ಆದರೆ ಬಹುದೊಡ್ಡ ಟೂರ್ನಿಯನ್ನು ಕೆಲವೇ ಆಟಗಾರರ ವೈಯಕ್ತಿಕ ಪ್ರದರ್ಶನ ಗೆಲ್ಲುವುದು ಸಾಧ್ಯವಿಲ್ಲ. ವಿಶ್ವಕಪ್ನಂಥಾ ಟೂರ್ನಿಯನ್ನು ಗೆಲ್ಲಬೇಕಾದರೆ ತಂಡವಾಗಿ ಪ್ರದರ್ಶನ ನೀಡಬೇಕಿದೆ. ಆದರೆ ತಂಡದ ನಾಯಕನಾಗಿ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯ ಬಗ್ಗೆ ಮಾತನಾಡುವಾಗ ಓರ್ವ ಆಟಗಾರನನ್ನು ಬೊಟ್ಟು ಮಾಡಿದ್ದು ಆ ಆಟಗಾರನ ಫಾರ್ಮ್ ತಂಡಕ್ಕೆ ನಿರ್ಣಾಯಕ ಎಂದು ಹೇಳುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.
ಅಂದಹಾಗೆ ನಾಯಕ ರೋಹಿತ್ ಶರ್ಮಾ ಈ ರೀತಿಯ ಮಾತನ್ನು ಹೇಳಿದ್ದು ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಚಾರವಾಗಿ. ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಮೇಲೆ ತಂಡ ಸಾಕಷ್ಟು ಅವಲಂಬಿತವಾಗಿದೆ ಎಂದು ರೋಹಿತ್ ಶರ್ಮಾ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗೆ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಕೂಡ ಆಲ್ರೌಂಡರ್ಗಳಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎನ್ನುವುದು ಗಮನಾರ್ಹ,
ಇನ್ನು ತಂಡದ ಪ್ರಕಟಣೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರೋಹಿತ್ ಶರ್ಮಾ "ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ನಮಗೆ ಬಹಳ ನಿರ್ಣಾಯಕವಾಗಿರಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಕೊಡುಗೆ ನೀಡಬಲ್ಲಂಥಾ ಆಟಗಾರ ಆತ. ಅದು ಬಹಳ ಮಹತ್ವ ಪಡೆದುಕೊಳ್ಳುತ್ತದೆ" ಎಂದು ಹೇಳಿಕೆ ನೀಡಿದ್ದಾರೆ. ತಂಡವಾಗಿ ಒಗ್ಗಟ್ಟಾಗಿ ಪ್ರದರ್ಶನ ನೀಡುವ ವಿಶ್ವಾಸ ನೀಡಬೇಕಾಗಿದ್ದ ನಾಯನೇ ಈ ರೀತಿಯ ಮಾತುಗಳನ್ನಾಡಿರುವುದು ಅಚ್ಚರಿ ಮೂಡಿಸಿದೆ.
ಇನ್ನು ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಅಗ್ರಕ್ರಮಾಂಕ ಅಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾಗ ತಂಡಕ್ಕೆ ನೆರವಾಗಿದ್ದು ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್. ಇವರಿಬ್ಬರು ಬೃಹತ್ ಶತಕದ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದ್ದರು. ಹಾರ್ದಿಕ್ ಪಾಂಡ್ಯ ಭಾರತದ ಪರವಾಗಿ 87 ರನ್ಗಳನ್ನು ಗಳಿಸಿ ಅತಿ ಹೆಚ್ಚಿನ ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ ನಂತರ ಈ ಪಂದ್ಯ ಮಳೆಗೆ ಆಹುತಿಯಾಗಿತ್ತು.