2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಸೂಪರ್ 4 ಹಣಾಹಣಿಯು ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದಿಂದ ಸ್ಮರಣೀಯ ಪ್ರದರ್ಶನ ಕಂಡುಬಂತು. ಅದರಲ್ಲಿ ಪ್ರಮುಖವಾಗಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಕುಲದೀಪ್ ಯಾದವ್ ಈ ಮೂವರು ಆಟಗಾರರು ಎದ್ದು ಕಾಣುತ್ತಾರೆ.

ಮಳೆಯಿಂದಾಗಿ ಮೀಸಲು ದಿನದಂದು ಪೂರ್ಣಗೊಂಡ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 122 ರನ್ ಮತ್ತು ಕೆಎಲ್ ರಾಹುಲ್ ಅಜೇಯ 111 ರನ್ ಗಳಿಸುವ ಮೂಲಕ ಭರ್ಜರಿ ಶತಕಗಳನ್ನು ಬಾರಿಸಿದರೆ, ಬೌಲಿಂಗ್ನಲ್ಲಿ ಕುಲದೀಪ್ ಯಾದವ್ ಐದು ವಿಕೆಟ್ ಸಾಧನೆ ಮಾಡಿದರು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಫಹೀಮ್ ಅಶ್ರಫ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ತಂಡದ ಮೊತ್ತವನ್ನು 50 ಓವರ್ಗಳಲ್ಲಿ 356 ರನ್ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ಈ ಸಿಕ್ಸರ್ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದ್ದು, ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಆ ಸಿಕ್ಸರ್ ಬಗ್ಗೆ ಎಕ್ಸ್ (ಟ್ವಿಟ್ಟರ್)ನಲ್ಲಿ ವಿಶೇಷ ಕಾಮೆಂಟ್ ಮಾಡಿದ್ದಾರೆ.
"ಪಾಕಿಸ್ತಾನ ವಿರುದ್ಧದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದು ಸರ್ಜಿಕಲ್ ಸ್ಟ್ರೈಕ್ ಆಗಿತ್ತು. ಅದಕ್ಕಿಂತ ಏನೂ ಕಡಿಮೆ ಇರಲಿಲ್ಲ. ಕನಿಷ್ಠ ಗಡಿಬಿಡಿ, ಚಲನೆ, ಪ್ರಯತ್ನವಿಲ್ಲದ ಮತ್ತು ಕ್ಲಿನಿಕಲ್ ಶಾಟ್ ಆಗಿತ್ತು. ಅವರನ್ನು ಕಿಂಗ್ ಕೊಹ್ಲಿ ಎಂದು ಕರೆಯಬಹುದು ಆದರೆ ಆತ ವೈದ್ಯಕೀಯ ಪದವಿಗೆ ಅರ್ಹರು. ಡಾಕ್ಟರ್ ಕೊಹ್ಲಿ..." ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
2023ರ ಏಷ್ಯಾ ಕಪ್ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಕೊಲಂಬೊದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 228 ರನ್ಗಳ ಜಯ ಸಾಧಿಸುವ ಮೂಲಕ ಹಲವಾರು ದಾಖಲೆಗಳನ್ನು ಅಳಿಸಿಹಾಕಿತು.
ಮಳೆ ಕಾರಣದಿಂದ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡುವುದರೊಂದಿಗೆ, ಮನರಂಜನೆಯ ಆಟಕ್ಕೆ ಸಾಕ್ಷಿಯಾಯಿತು. ಪಂದ್ಯ ಮುಗಿಯುತ್ತಿದ್ದಂತೆ, ಕ್ರಿಕೆಟ್ ಮಾತ್ರವಲ್ಲದೆ ವೀಕ್ಷಣೆಯ ದಾಖಲೆಗಳೂ ಮುರಿಯಲ್ಪಟ್ಟವು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಸ್ವತಃ ದೊಡ್ಡ ವೀಕ್ಷಣೆ ದಾಖಲೆಯನ್ನು ಮುರಿದ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ)ಯ ಅಧ್ಯಕ್ಷರೂ ಆಗಿರುವ ಜಯ್ ಶಾ ಪ್ರಕಾರ, ಡಿಜಿಟಲ್ ಮಾಧ್ಯಮಗಳ ಮೂಲಕ ಪಂದ್ಯವನ್ನು ವೀಕ್ಷಿಸಲು ಏಕಕಾಲದಲ್ಲಿ 2.8 ಕೋಟಿ ಜನರು ಟ್ಯೂನ್ ಆಗಿದ್ದರು ಎಂದು ತಿಳಿಸಿದ್ದಾರೆ.
"ಇಂದಿನ ಭಾರತ vs ಪಾಕಿಸ್ತಾನ ಪಂದ್ಯವನ್ನು ಡಿಸ್ನಿ+ ಹಾಟ್ಸ್ಟಾರ್ನಲ್ಲಿ 2.8 ಕೋಟಿ ಏಕಕಾಲದ ಬಳಕೆದಾರರನ್ನು ಗಳಿಸಿದೆ. ಇದು ಡಿಜಿಟಲ್ ಇತಿಹಾಸದಲ್ಲಿ ಭಾರತದ ಯಾವುದೇ ಪಂದ್ಯಕ್ಕಿಂತ ಅತ್ಯಧಿಕವಾಗಿದೆ. ಹಿಂದಿನ ಅತ್ಯುತ್ತಮವಾದದ್ದು ಭಾರತ vs ನ್ಯೂಜಿಲೆಂಡ್ ನಡುವಿನ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ 2.52 ಕೋಟಿ ಜನರು ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದರು," ಎಂದು ಜಯ್ ಶಾ ಎಕ್ಸ್ (ಟ್ವಿಟ್ಟರ್) ನಲ್ಲಿ ಮಾಹಿತಿ ನೀಡಿದ್ದಾರೆ.
ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ನಡುವಿನ 121 ರನ್ ಆರಂಭಿಕ ಜೊತೆಯಾಟದ ನಂತರ, ಶೀಘ್ರದಲ್ಲೇ ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡಿತು.
ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕ್ರಮವಾಗಿ ಮುರಿಯದ ಮೂರನೇ ವಿಕೆಟ್ಗೆ 233 ರನ್ಗಳ ಜೊತೆಯಾಟ ನೀಡಿ ಭಾರತ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.
ನಂತರ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 128 ರನ್ಗಳಿಗೆ ಸರ್ವಪತನ ಕಂಡಿತು ಮತ್ತು ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಪಡೆದು ಮಿಂಚಿದರು.