ಮುಂಬೈ, ಏಪ್ರಿಲ್ 04 : ಮನುಷ್ಯರಿಗೆ, ದನ-ಕರುಗಳಿಗೆ, ಪ್ರಾಣಿ ಹಾಗೂ ಪಕ್ಷಿಗಳಿಗೆ ಬರದ ಛಾಯೆ ಎದುರಾಗಿದ್ದನ್ನು ಇದುವರೆಗೆ ಕೇಳಿದ್ದೇವೆ ಆದರೆ ಈಗ ಇದೇ ಏಪ್ರಿಲ್ 9 ರಿಂದ ಆರಂಭವಾಗಲಿರುವ 9ನೇ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ನ ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುವ ಪಂದ್ಯಗಳಿಗೆ ಬರದ ಛಾಯೆ ಎದುರಾಗಿದೆ.
ಹೌದು ಮಹಾರಾಷ್ಟ್ರದಲ್ಲಿ ಬರದ ಪರಿಸ್ಥಿತಿಯಿರುವ ಕಾರಣ ನಾಗ್ಪುರ, ಮುಂಬೈ, ಪುಣೆಯಲ್ಲಿ ನಡೆಯಲಿರುವ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಮುಂಬೈ ಬಿಜೆಪಿ ಘಟಕದ ಕಾರ್ಯದರ್ಶಿ ವಿವೇಕಾನಂದ ಗುಪ್ತ ಅವರು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ಪತ್ರ ಬರೆದಿದ್ದಾರೆ. ಐಪಿಎಲ್ 2016 : ವೇಳಾಪಟ್ಟಿ | ತಂಡಗಳು | ಗ್ಯಾಲರಿ
ಯಥೇಚ್ಛವಾಗಿ ನೀರು ಬಳಕೆ: ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ದುರಸ್ತಿ ಮಾಡಲು ಮತ್ತು ಗುಣಮಟ್ಟ ಕಾಪಾಡಲು ಏನಿಲ್ಲವೆಂದರೂ ಸುಮಾರು 80 ಸಾವಿರದಿಂದ 1 ಲಕ್ಷ ಲೀಟರ್ ನೀರಿನ ಅಗತ್ಯವಾಗಿ ಬೇಕಾಗುತ್ತದೆ. ಪುಣೆ, ಮುಂಬೈ ಮತ್ತು ನಾಗ್ಪುರ ಈ ಮೂರು ಮೈದಾನಗಳಿಗೆ ವಾರದಲ್ಲಿ ಕನಿಷ್ಠ 1.60 ಲಕ್ಷ ರಿಂದ 3 ಲಕ್ಷ ಲೀಟರ್ ನೀರು ಅಗತ್ಯವಾಗಿ ಬೇಕಾಗುತ್ತದೆ. [ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!]

ರಾಜ್ಯದಲ್ಲಿ ಬರಗಾಲ ಎದುರಾಗಿದ್ದರಿಂದ ತೀವ್ರವಾಗಿ ನೀರಿನ ಕೊರತೆ ಎದುರಾಗಿದೆ. ಅಲ್ಲದೆ ಮುಂಬೈನಲ್ಲಿ ನೀರಿನ ಅಭಾವವಿದೆ. ಹಾಗಾಗಿ ಹೆಚ್ಚಿನ ಪ್ರಮಾಣದ ನೀರನ್ನು ವ್ಯಯಿಸುವುದು ಸರಿಯೇ ಎಂದು ಪತ್ರದಲ್ಲಿ ಬಿಸಿಸಿಐಗೆ ಪ್ರಶ್ನಿಸಿದ್ದಾರೆ.
ಏ.9 ರಿಂದ ಪ್ರಾರಂಭವಾಗಿ ಮೇ. 29 ರ ವರೆಗೆ ನಡೆಯುವ ಪಂದ್ಯಗಳಲ್ಲಿ ಮುಂಬೈ, ನಾಗ್ಪುರ, ಪುಣೆ ಮೈದಾನಗಳಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ಈ 19 ಪಂದ್ಯಗಳಿಗಾಗಿ ಮೈದಾನಗಳನ್ನು ಸಜ್ಜುಗೊಳಿಸಬೇಕಾದರೆ ಸುಮಾರು 70 ಲಕ್ಷ ಲೀಟರ್ ನೀರು ಬೇಕಾಗುತ್ತದೆ.
ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ಮಳೆ ಪ್ರಮಾಣ ಕುಂಠಿತಗೊಂಡಿದ್ದರಿಂದ ಅಂತರ್ಜಲದ ಮಟ್ಟ ಕುಸಿದು 90 ಲಕ್ಷ ರೈತರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಗುಪ್ತಾ ಹೇಳಿದ್ದಾರೆ.
ಬಿಸಿಸಿಐ ನೀರಿನ ತೊಂದರೆಯನ್ನು ಅರಿತು ಮಹಾರಾಷ್ಟ್ರದಿಂದ ಬೇರೆಡೆಗೆ ಪಂದ್ಯಗಳನ್ನು ಸ್ಥಳಾಂತರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿವೇಕಾನಂದ ಗುಪ್ತಾ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವದನ್ನು ಕಾದು ನೋಡಬೇಕಾಗಿದೆ.