ಶನಿವಾರ, ಜುಲೈ 1ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ದುಲೀಪ್ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಈಶಾನ್ಯ ವಲಯ ವಿರುದ್ಧ ಉತ್ತರ ವಲಯ ತಂಡವು 511 ರನ್ಗಳ ಬೃಹತ್ ಗೆಲುವು ದಾಖಲಿಸಿತು ಮತ್ತು ಸೆಮಿಫೈನಲ್ಗೆ ಪ್ರವೇಶ ಪಡೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ವಲಯ ತಂಡವು ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ಗೆ 540 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಧ್ರುವ ಶೋರೆ 135 ರನ್, ನಿಶಾಂತ್ ಸಿಂಧು 150 ರನ್, ಹರ್ಷಿತ್ ರಾಣಾ 122 ರನ್ ಗಳಿಸಿ ಮಿಂಚಿದರು.
ಬೌಲಿಂಗ್ನಲ್ಲಿ ಈಶಾನ್ಯ ವಲಯ ತಂಡದ ಪರ ಫೀರೋಯಿಜಮ್ ಜೋಟಿನ್, ಇಮ್ಲಿವಾಟಿ ಲೆಮ್ಟೂರ್, ಕಿಶನ್ ಸಿಂಘ ತಲಾ ಎರಡು ವಿಕೆಟ್ ಪಡೆದರೆ, ಪಲ್ಜೋರ್ ತಮಾಂಗ್, ಡಿಪ್ಪು ಸಂಗ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಈಶಾನ್ಯ ವಲಯ ತಂಡವು ಕೇವಲ 134 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಪರ ನೀಲೇಶ್ ಲ್ಯಾಮಿಶ್ಚಾನೆ 44 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು.
ಬೌಲಿಂಗ್ನಲ್ಲಿ ಉತ್ತರ ವಲಯ ತಂಡದ ಪರ ಸಿದ್ಧಾರ್ಥ್ ಕೌಲ್ ಮತ್ತು ಪುಲ್ಕಿತ್ ನಾರಂಗ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಬಲ್ತೇಜ್ ಸಿಂಗ್, ಹರ್ಷಿತ್ ರಾಣಾ, ಜಯಂತ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ನಲ್ಲಿ 406 ರನ್ಗಳ ಬೃಹತ್ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆಡಿದ ಉತ್ತರ ವಲಯ ತಂಡವು 259 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಅಂಕಿತ್ ಕುಮಾರ್ 70 ರನ್, ಪ್ರಭ್ಸಿಮ್ರಾನ್ 59 ರನ್, ಜಯಂತ್ ಯಾದವ್ 59 ರನ್, ಅಂಕಿತ್ ಕಲ್ಸಿ 49 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಈಶಾನ್ಯ ವಲಯ ತಂಡದ ಪರ ಫೀರೋಯಿಜಮ್ ಜೋಟಿನ್, ಕಿಶನ್ ಸಿಂಘ, ಇಮ್ಲಿವಾಟಿ ಲೆಮ್ಟೂರ್ ತಲಾ 2 ವಿಕೆಟ್ ಪಡೆದರು.
ಇನ್ನು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಗೆಲುವಿಗೆ 666 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಈಶಾನ್ಯ ವಲಯ ತಂಡದ ಯಾವ ಬ್ಯಾಟ್ಸ್ಮನ್ಗಳು ಯಾವುದೇ ಪ್ರತಿರೋಧ ತೋರದೆ 154 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ದಾಖಲೆಯ 511 ರನ್ಗಳ ಬೃಹತ್ ಅಂತರದಿಂದ ಸೋಲು ಕಂಡಿತು.
ಈ ವೇಳೆ ಉತ್ತರ ವಲಯ ತಂಡದ ಪರ ಪುಲ್ಕಿತ್ ನಾರಂಗ್ 4 ವಿಕೆಟ್ ಪಡೆದರೆ, ನಿಶಾಂತ್ ಸಿಂಧು 2 ವಿಕೆಟ್, ಬಲ್ತೇಜ್ ಸಿಂಗ್, ಹರ್ಷಿತ್ ರಾಣಾ, ಜಯಂತ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮುಂಬರುವ ಸೆಮಿಫೈನಲ್ ಪಂದ್ಯದಲ್ಲಿ ಜುಲೈ 5ರಿಂದ ಆಲೂರು ಮೈದಾನದಲ್ಲಿ ಕೇಂದ್ರ ವಲಯ ತಂಡವು ಪಶ್ಚಿಮ ವಲಯ ತಂಡವನ್ನು ಎದುರಿಸಲಿದೆ. ಇನ್ನು ಉತ್ತರ ವಲಯ ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.
ಇದೇ ವೇಳೆ ಮತ್ತೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೇಂದ್ರ ತಂಡವು ಪೂರ್ವ ವಲಯ ತಂಡವನ್ನು 170 ರನ್ಗಳ ಅಂತರದಿಂದ ಸೋಲಿಸಿ, ಸೆಮಿಫೈನಲ್ಗೆ ಅರ್ಹತೆ ಪಡೆಯಿತು.