ಅನುಭವಿ ಆಟಗಾರ ಮಂದೀಪ್ ಸಿಂಗ್ ಗಾಯದ ಸಮಸ್ಯೆಯಿಂದ ದುಲೀಪ್ ಟ್ರೋಪಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಹರಿಯಾಣ ಆಲ್ರೌಂಡರ್ ಜಯಂತ್ ಯಾದವ್ ಮುಂಬರುವ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯವನ್ನು ಮುನ್ನಡೆಸಲಿದ್ದಾರೆ ಎಂದು ವಲಯ ಸಮಿತಿಯ ಸಂಚಾಲಕ ಅನಿರುದ್ಧ ಚೌಧರಿ ಮಾಹಿತಿ ನೀಡಿದ್ದಾರೆ. ಕಳೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ನೇಹಲ್ ವಧೇತಾ ಅವರನ್ನು ಸ್ಟ್ಯಾಂಡ್ ಬೈ ಆಟಗಾರನನ್ನಾಗಿ ಹೆಸರಿಸಲಾಗಿತ್ತು. ಇದೀಗ ಮುಖ್ಯ ತಂಡದಲ್ಲಿ ವಧೇರಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
"ಮಂದೀಪ್ ಸಿಂಗ್ ಗಾಯಗೊಂಡಿದ್ದು ದುಲೀಪ್ ಟ್ರೋಫಿಗೆ ಅಲಭ್ಯರಾಗುತ್ತಾರೆ ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನಿಂದ ನಮಗೆ ಇಂದು ಬೆಳಿಗ್ಗೆ ಸೂಚನೆ ಬಂದಿದೆ" ಎಂದು ಗುರುವಾರ ಅನಿರುದ್ಧ್ ಚೌಧರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಮಂದೀಪ್ ಸಿಂಗ್ ಅವರು ಗಾಯದಿಂದಾಗಿ ಅಲಭ್ಯವಾಗಿರುವ ಕಾರಣದಿಂದಾಗಿ ಇಂದು ಸಂಜೆ ಉತ್ತರ ವಲಯ ಆಯ್ಕೆ ಸಮಿತಿಯ ಎಲ್ಲಾ ಆಯ್ಕೆದಾರರೊಂದಿಗೆ ವೀಡಿಯೊ ಕಾನ್ಫರೆನ್ಸ್ ಅನ್ನು ಆಯೋಜಿಸಲಾಯಿತು. ಚೇತನ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆದಾರರ ಮೀಟಿಂಗ್ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು ಮಂದೀಪ್ ಸಿಂಗ್ ಬದಲಿಗೆ ನೇಹಾಲ್ ವಧೇರಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಅವಿರೋಧವಾಗಿ ನಿರ್ಧರಿಸಲಾಗಿದೆ" ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಮಂದೀಪ್ ಸಿಂಗ್ ಉತ್ತರ ವಲಯ ತಂಡದ ನಾಯಕರಾಗಿದ್ದ ಕಾರಣ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡಕ್ಕೆ ಹೊಸ ನಾಯಕನ್ನು ನೇಮಿಸುವ ಅಗತ್ಯವಿತ್ತು. ಹಾಗಾಗಿ ಜಯಂತ್ ಯಾದವ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಚೌಧರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೂನ್ 28 ರಿಂದ ಜುಲೈ 1 ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ವಲಯ ಈಶಾನ್ಯ ವಲಯವನ್ನು ಎದುರಿಸಲಿದೆ.