ಕ್ರಿಕೆಟ್ ಅಂಗಳದಲ್ಲೇ 'ಕಣ್ಣೀರಧಾರೆ': ಭಾರತೀಯ ಕ್ರಿಕೆಟ್ನ 5 ಕಣ್ಣೀರ ಕಥೆ!

ಕ್ರಿಕೆಟ್ ಕೇವಲ ಆಟವಲ್ಲ ಭಾರತೀಯರ ಪಾಲಿಗೆ ಅದೊಂದು ಧರ್ಮ ಎಂಬ ಮಾತಿದೆ. ಅದಕ್ಕೆ ಕ್ರಿಕೆಟ್ನ ಸೋಲು ಗೆಲುವು ಅಭಿಮಾನಿಗಳಿಗೆ ಬಹಳ ಮುಖ್ಯ. ಅದರಲ್ಲೂ ಪ್ರಮುಖ ಟೂರ್ನಿಗಳನ್ನು ಅಭಿಮಾನಿಗಳು ಅದೆಷ್ಟು ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ ಎಂದರೆ ಅಂತಾ ಟೂರ್ನಿಗಳನ್ನು ಸೋತ ಸಂದರ್ಭದಲ್ಲಿ ಕ್ರಿಕೆಟಿಗರ ಮನೆಗಳಿಗೆ ಕಲ್ಲುಹೊಡದಂತಾ ಸಂದರ್ಭಗಳೂ ಇವೆ.
ಇದು ಅಭಿಮಾನಿಗಳ ಭಾಗವಾದರೆ ಸ್ವತಃ ಕ್ರಿಕೆಟರ್ಗಳಿಗೆ ಈ ಆಟವೇ ಸರ್ವಸ್ವವಾಗಿರುತ್ತದೆ. ಹೀಗಾಗಿಯೇ ಕ್ರಿಕೆಟಿಗರು ಅನೇಕ ಬಾರಿ ತಮ್ಮ ಭಾವನೆಗಳನ್ನು ಹಿಡಿದಿಡಲು ಕಷ್ಟಪಟ್ಟ ಸಂದರ್ಭಗಳು ಸಾಕಷ್ಟಿವೆ. ಹೀಗೆ ಭಾವುಕತೆ ಕಣ್ಣೀರಾಗಿ ಹರಿದ ಅನೇಕ ದೃಷ್ಟಾಂತಗಳು ಕ್ರಿಕೆಟ್ ಮೈದಾನದಲ್ಲಿ ಇವೆ. ಇದಕ್ಕೆ ಭಾರತೀಯ ಕ್ರಿಕೆಟಿಗರೂ ಹೊರತಲ್ಲ.
ಟೀಮ್ ಇಂಡಿಯಾದ ಕ್ರಿಕೆಟಿಗರು ಭಾವುಕರಾಗಿ ಮೈದಾನದಲ್ಲೇ ಕಣ್ಣೀರು ಸಂದರ್ಭಗಳು ಇವೆ. ಹೀಗೆ ಕಣ್ಣೀರು ಹಾಕಿದ ಐದು ಸಂದರ್ಭಗಳು ಮತ್ತು ಆಟಗಾರರು ಯಾರು ಎಂದುದನ್ನು ನೋಡೋಣ

1996ರ ವಿಶ್ವಕಪ್ನಲ್ಲಿ ವಿನೋದ ಕಾಂಬ್ಳಿ
1996ರ ವಿಶ್ವಕಪ್ನಲ್ಲಿ ಭಾರತ ಸೆಮಿ ಫೈನಲ್ಲ್ಲಿ ಆಘಾತಕರ ರೀತಿಯಲ್ಲಿ ಟೀಮ್ ಇಂಡಿಯಾ ಹೊರಬಿತ್ತು. ಸೆಮಿ ಫೈನಲ್ಗೆ ತಲುಪಿದ್ದ ಭಾರತ ಶ್ರೀಲಂಕಾ ತಂಡವನ್ನು ಎದುರಿಸಿತ್ತು. ಗೆಲ್ಲುವ ಭರವಸೆಯಲ್ಲೇ ಇದ್ದ ಟೀಮ್ ಇಂಡಿಯಾ ಶ್ರೀಲಂಕಾವನ್ನು 250 ರನ್ಗೆ ಕಟ್ಟಿಹಾಕಿತ್ತು. ಭಾರತ ಆರಂಭ ಕೂಡ ಉತ್ತಮವಾಗಿತ್ತು. ಅರ್ಧ ಶತಕ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಔಟಾಗಿದ್ದೇ ಭಾರತದ ಸ್ಥಿತಿಯೇ ಬದಲಾಗಿ ಬಿಟ್ಟಿತ್ತು. 98 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ, ನಂತರ, 120 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಭಾರತದ ಧಿಡೀರ್ ಕುಸಿತವನ್ನು ಸಹಿಸದ ಅಭಿಮಾನಿಗಳು ಗದ್ದಲ ಗಲಾಟೆಯನ್ನು ಆರಂಭಿಸಿದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪಂದ್ಯವನ್ನು ನಿಲ್ಲಿಸುವ ನಿರ್ಧಾರಕ್ಕೆ ಬರಲಾಯಿತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವಿನೋದ್ ಕಾಂಬ್ಳಿ ಗಳಗಳನೆ ಕಣ್ಣೀರಿಡುತ್ತಾ ಪೆವಿಲಿಯನ್ ಕಡೆಗೆ ಹೆಜ್ಜೆಯಿಟ್ಟಿದ್ದರು.

ಐಪಿಎಲ್ನಲ್ಲಿ ಶ್ರೀಶಾಂತ್
ಅದು ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭಿಕ ಆವೃತ್ತಿ. ಅಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ನಡೆದುಕೊಂಡು ಬಂದಿತ್ತು. ಆದರೆ ಮೊಹಾಲಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದ ಅಂತ್ಯದಲ್ಲಿ ಪಂಜಾಬ್ ತಂಡದ ಶ್ರೀಶಾಂತ್ ಅಳುತ್ತಿರುವುದು ಕಂಡು ಬಂದಿತ್ತು. ಇದು ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದರು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಕಾರಣಕ್ಕೆ ಹರ್ಭಜನ್ ಸಿಂಗ್ ಟೂರ್ನಿಯ ಉಳಿದ ಪಂದ್ಯಗಳಿಂದ ನಿಶೇಧಕ್ಕೆ ಒಳಗಾದರು. ಬಳಿಕ ಘಟನೆಗೆ ಹರ್ಭಜನ್ ಕ್ಷಮೆಯನ್ನೂ ಕೋರಿದ್ದರು. ಈ ಬಗ್ಗೆ ಇತ್ತೀಚೆಗೆ ಮತ್ತೆ ಮಾತನಾಡಿದ್ದ ಹರ್ಭಜನ್ ನಾನು ಆ ರೀತಿ ವರ್ತಿಸಬಾರದಾಗಿತ್ತು ಎಂದು ಹೇಳಿಕೊಂಡಿದ್ದರು

ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್
ಮೊದಲ ವಿಶ್ವಕಪ್ ಗೆದ್ದ ಬಳಿಕ ಆ ಸಾಧನೆಯನ್ನು ಪುನರಾವರ್ತಿಸಲು ಟೀಮ್ ಇಂಡಿಯಾಗೆ 28 ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ. ಆದರೆ 2011ರಲ್ಲಿ ಆ ಕನಸು ನನಸಾಗಿತ್ತು. ಶ್ರೀಲಂಕಾ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ವಿಶ್ವ ಚಾಂಪಿಯನ್ ಎನಿಸಿತ್ತು. ಧೋನಿ ಸಿಕ್ಸರ್ ಮೂಲಕ ಗೆಲುವನ್ನು ಸಾರುತ್ತಿದ್ದಂತೆಯೇ ಇಡೀ ದೇಶವೇ ಸಂಭ್ರಮಿಸಿತ್ತು. ಈ ವೇಳೆ ಟೀಮ್ ಇಂಡಿಯಾದ ಈ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದ ಯುವರಾಜ್ ಸಿಂಗ್ ತಮ್ಮ ಆಪ್ತ ಗೆಳೆಯ ಹರ್ಭಜನ್ ಸಿಂಗ್ ಅವರನ್ನು ಅಪ್ಪಿಕೊಂಡು ಇಬ್ಬರೂ ಆನಂದಭಾಷ್ಪ ಹರಿಸಿದರು. ಇದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

2012ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ
ಶ್ರೀಲಂಕಾದಲ್ಲಿ ನಡೆದಿದ್ದ 2012 ಟಿ20 ವಿಶ್ವಕಪ್ನಲ್ಲಿ ಭಾರತ ಗೆಲ್ಲುವ ಫೆವರೀಟ್ ತಂಡವಾಗಿಯೇ ಕಾಲಿಟ್ಟಿತ್ತು. ಅದಕ್ಕೆ ಪೂರಕವಾಗಿ ಲೀಗ್ ಹಂತದಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆದರೆ ಸೂಪರ್ 8ರ ಹಂತದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 30ಕ್ಕೂ ಹೆಚ್ಚು ರನ್ಗಳಿಂದ ಗೆಲ್ಲಬೇಕಾದ ಒತ್ತಡದಲ್ಲಿತ್ತು. ಆದರೆ ಪಂದ್ಯವನ್ನು ಗೆದ್ದರೂ ಗೆಲುವಿನ ಅಂತರಮಾತ್ರ ಒಂದು ರನ್ ಆಗಿದ್ದ ಕಾರಣ ಟೂರ್ನಿಯಿಂದ ಹೊರಬಿತ್ತು. ಈ ವೇಳೆ ವಿರಾಟ್ ಕೊಹ್ಲಿ ಆಘಾತವನ್ನು ನಿಯಂತ್ರಿಸಲಾಗದೆ ಮೈದಾನದಲ್ಲೇ ಕಣ್ಣೀರು ಹಾಕಿದ್ದರು.

ವಿದಾಯ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್
ಇದು ಕೇವಲ ಕ್ರಿಕೆಟಿಗನೊಬ್ಬ ಮಾತ್ರವಲ್ಲ ಪ್ರತಿ ಅಭಿಮಾನಿಯ ಕಣ್ಣಂಚಲ್ಲೂ ಹನಿ ನೀರು ಜಿನುಗಿದ ಸಂದರ್ಭ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕ್ಷಣವದು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಅಂತ್ಯದಲ್ಲಿ ಎರಡೂ ಕೈ ಬೀಸಿ ಸಚಿನ್ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿದ್ದರೆ ಗೊತ್ತಿಲ್ಲದೆ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಮಾತ್ರವಲ್ಲ ಅಭಿಮಾನಿಗಳೂ ಈ ಕ್ಷಣದಲ್ಲಿ ಭಾವುಕರಾಗಿದ್ದರು. ಕಣ್ಣುಜ್ಜಿಕೊಂಡೇ ಸಚಿನ್ ಪೆವಿಲಿಯನ್ಗೆ ಹೆಜ್ಜೆಯಿಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications