ಟಿ20 ವಿಶ್ವಕಪ್ ಲೀಗ್ ಹಂತ ಮುಗಿಯುವತ್ತ ಹೆಜ್ಜೆ ಇಟ್ಟಿದೆ. ಈಗ ಸೂಪರ್ 8ಕ್ಕೆ ಅರ್ಹತೆ ಪಡೆದ ತಂಡಗಳು ತಯಾರಿ ನಡೆಸಿವೆ. ಆದರೆ ಈ ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ಹೊರ ನಡೆದಿತ್ತು. ಆದರೆ ಈಗ ದಿನಗಳು ಕಳೆದಂತೆ ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದ ಹೊರ ನಡೆಯಲು ಕಾರಣ ಏನು ಎಂಬ ಬಗ್ಗೆ ಹೊಸ ಹೊಸ ವಿಷಯಗಳು ಬಹಿರಂಗವಾಗುತ್ತಿವೆ.
ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಅಲ್ಲದೆ ತಾವು ಆಡುವ ಪಂದ್ಯಗಳ ಸ್ಥಳಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಬದಲಾವಣೆ ಮಾಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಬೇಡಿಕೆ ಇಟ್ಟಿತ್ತು. ಆದರೆ ಐಸಿಸಿ, ಬಿಸಿಬಿ ಅವರ ಬೇಡಿಕೆಯನ್ನು ತಿರಸ್ಕರಿಸಿತ್ತು. ಬಾಂಗ್ಲಾದೇಶವನ್ನು ಬೆಂಬಲಿಸಲು ಪಾಕಿಸ್ತಾನ ಸಹ ಭಾರತದೊಂದಿಗಿ ಲೀಗ್ ಹಂತದ ಪಂದ್ಯಗಳನ್ನು ಆಡದಿರಲು ನಿರ್ಧರಿಸಿತ್ತು. ಆದರೆ ಪಿಸಿಬಿ, ಐಸಿಸಿ, ಬಿಸಿಬಿ ನಡುವಿನ ಚರ್ಚೆಗಳ ಬಳಿಕ ಮತ್ತೆ ಪಾಕ್ ತನ್ನ ನಿಲುವನ್ನು ಸಡಿಲ ಪಡಿಸಿತು.

ರೆವ್ಸ್ಪೋರ್ಟ್ಸ್ ಪ್ರಕಾರ, ತಮ್ಮದೇ ದೇಶದ ಕ್ರಿಕೆಟ್ ನಿರ್ವಹಣೆಯನ್ನು ಬಿಸಿಬಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫುಲ್ ಹಕ್ ಟೀಕಿಸಿದ್ದರು. ದೇಶದಲ್ಲಿ ಕ್ರಿಕೆಟ್ ಗೌರವಿಸಲಾಗುತ್ತದೆ. ಆದರೆ ಕೆಲವು ವ್ಯಕ್ತಿಗಳು ಹಾಗೂ ಸರ್ಕಾರದ ತಪ್ಪು ನಿರ್ಧಾರದಿಂದ ಬಾಂಗ್ಲಾದೇಶ ವರ್ಚಸ್ಸು ವಿಶ್ವ ಕ್ರಿಕೆಟ್ನಲ್ಲಿ ಕಡಿಮೆ ಆಗಿದೆ ಎಂದು ಹೇಳಿದ್ದರು.
ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಮಾತುಗಳಿಗೆ ಬಲಿಯಾಗಿ ಅಜ್ಞಾನಿಯಂತೆ ವರ್ತಿಸಿದರು. ನಖ್ವಿ ಅಮೀನುಲ್ ಮೇಲೆ ಪ್ರಭಾವ ಬೀರಿ, ಅವರನ್ನು ತನ್ನೊಂದಿಗೆ ಸೇರಲು ಮನವೊಲಿಸಿದರು ಎಂದು ತಿಳಿದು ಬಂದಿದೆ. ಭಾರತದಲ್ಲಿ ಆಟಗಾರರ ಸುರಕ್ಷತೆಯ ಭರವಸೆ ಸಿಕ್ಕಿದ್ದರೂ, ಬಾಂಗ್ಲಾದೇಶ ತನ್ನ ತಂಡವನ್ನು ಕಳುಹಿಸಲು ಹಿಂದೇಟು ಹಾಕಿತು. ಪರಿಣಾಮವಾಗಿ, ಐಸಿಸಿ ದಿಟ್ಟ ಹೆಜ್ಜೆಯನ್ನು ಇಟ್ಟು ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್ನಿಂದ ಹೊರಗಿಟ್ಟು, ಸ್ಕಾಟ್ಲೆಂಡ್ಗೆ ಅವಕಾಶ ನೀಡಲಾಯಿತು.
ಭಾರತ ವಿರುದ್ಧದ ಲೀಗ್ ಹಂತದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದ ಪಾಕ್, ಐಸಿಸಿ ಸರಣಿ ಸಭೆಗಳ ಬಳಿಕ ಯು-ಟರ್ನ್ ಹೊಡೆದು ಪಂದ್ಯವನ್ನು ಕೊಲಂಬೊದಲ್ಲಿ ಫೆಬ್ರವರಿ 15 ರಂದು ಪಂದ್ಯವನ್ನು ಆಡಿ 61 ರನ್ ಸೋಲು ಕಂಡಿತು.