
ಭಾರತ ತಂಡದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದದ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಭಾರತ ತಂಡ ನರಕಕ್ಕೆ ಹೋಗಲಿ (ಗೋ ಟು ಹೆಲ್) ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಜಾವೇದ್ ಮಿಯಾಂದದ್ ಹೇಳಿಕೆಗೆ ಹಲವರು ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದಾರೆ. ಮಾಜಿ ಕ್ರಿಕೆಟಿಗ, ಕನ್ನಡಿಗ ವೆಂಕಟೇಶ್ ಪ್ರಸಾದ್ ಜಾವೇದ್ ಮಿಯಾಂದದ್ಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಜಾವೇದ್ ಮಿಯಾಂದದ್ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ವೆಂಕಟೇಶ್ ಪ್ರಸಾದ್, "ಭಾರತ ತಂಡ ನರಕಕ್ಕೆ ಹೋಗುವುದಕ್ಕೇನೆ ನಿರಾಕರಿಸುತ್ತಿರುವುದು" ಎಂದು ಹೇಳುವ ಮೂಲಕ ಮಿಯಾಂದದ್ಗೆ ತಕ್ಕ ಉತ್ತರ ನೀಡಿದ್ದಾರೆ.
ಪರೋಕ್ಷವಾಗಿ ಪಾಕಿಸ್ತಾನವನ್ನೇ ನರಕ ಎಂದು ಕರೆಯುವ ಮೂಲಕ ಭಾರತ ತಂಡ ನರಕಕ್ಕೆ ಬರಲು ಒಪ್ಪುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವೆಂಕಟೇಶ್ ಪ್ರಸಾದ್ ನೀಡಿರುವ ಪ್ರತಿಕ್ರಿಯೆಗೆ ಅಭಿಮಾನಿಗಳು ಭಾರಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕನಿಗೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ ಎಂದು ಹಲವರು ಹೊಗಳಿದ್ದಾರೆ. ಅಜಿತ್ ಅಗರ್ಕರ್ ಟ್ವೀಟ್ ಮೆನ್ಷನ್ ಮಾಡುವ ಮೂಲಕ ಈಗೇನು ಹೇಳ್ತೀರಾ ಎಂದು ಜಾವೇದ್ ಮಿಯಾಂದದ್ಗೆ ಪ್ರಶ್ನೆ ಮಾಡಿದ್ದಾರೆ.

ಏನಿದು ವಿವಾದ?
2023ರ ಏಷ್ಯಾಕಪ್ನಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ ನಂತರ ವಿವಾದ ಶುರುವಾಗಿದೆ. ಬಹ್ರೇನ್ನಲ್ಲಿ ನಡೆದ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಂ ಸೇಥಿಗೆ ಏಷ್ಯಾಕಪ್ ಆಡಲು ಭಾರತ ಪಾಕಿಸ್ತಾನಕ್ಕೆ ಬರಲ್ಲ ಎನ್ನುವ ಮೂಲಕ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ಪಟ್ಟುಹಿಡಿದರು.
ಆಟಗಾರರ ಭದ್ರತೆಯ ಕಾರಣ ನೀಡಿ ಜಯ್ ಶಾ ಈ ನಿರ್ಧಾರ ಮಾಡಿದ್ದರು. ಇದಕ್ಕೆ ನಜಂ ಸೇಥಿ ವಿರೋಧಿಸಿದ್ದರು. ಆದರೆ, ಎಸಿಸಿ ಸಭೆಯಲ್ಲಿ ಭಾರತಕ್ಕೆ ಹೆಚ್ಚಿನ ಬೆಂಬಲ ಸಿಕ್ಕ ಕಾರಣ, ಏಷ್ಯಾಕಪ್ ಈ ಬಾರಿ ಪಾಕಿಸ್ತಾನದಿಂದ ಸ್ಥಳಾಂತರವಾಗಲಿದೆ.
ನಾಲಿಗೆ ಹರಿಬಿಟ್ಟ ಜಾವೇದ್ ಮಿಯಾಂದದ್
ಬಿಸಿಸಿಐನ ನಿರ್ಧಾರದ ವಿರುದ್ಧ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದದ್ ಆಕ್ರೋಶ ವ್ಯಕ್ತಪಡಿಸಿದ್ದರು.
"ಭಾರತ ತಂಡ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ಹೆದರುವುದಿಲ್ಲ. ಅವರು ನರಕಕ್ಕೆ ಹೋಗಬಹುದು. ಇಂತಹ ವಿಚಾರಗಳನ್ನು ಐಸಿಸಿ ನಿಯಂತ್ರಿಸಬೇಕು. ಇಲ್ಲದಿದ್ದಲ್ಲಿ ಐಸಿಸಿ ಆಡಳಿತ ಮಂಡಳಿ ಇದ್ದು ಪ್ರಯೋಜನವಿಲ್ಲ. ಐಸಿಸಿ ಎಲ್ಲಾ ತಂಡಗಳಿಗೂ ಒಂದೇ ನಿಯಮ ಹೊಂದಿರಬೇಕು. ಏಷ್ಯಾಕಪ್ಗೆ ಬರದಿದ್ದರೆ ಅದು ಎಂತಹ ಬಲಿಷ್ಠ ತಂಡವಾದರೂ ತೆಗೆದುಹಾಕಬೇಕು" ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಜಿತ್ ಅಗರ್ಕರ್ ಪಾಕಿಸ್ತಾನವನ್ನೇ ನರಕ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.