ಪಾಕಿಸ್ತಾನ ವಿರುದ್ಧ ಹೀನಾಯ ಸೋಲು: ಭಾರತ ಮಾಡಿದ 5 ತಪ್ಪುಗಳು
ಲಂಡನ್, ಜೂನ್ 18: ಕೋಟ್ಯಂತರ ಭಾರತೀಯರಿಗೆ ಈ ಬಾರಿಯ ವೀಕೆಂಡ್ ನ ಕೊನೆಯ ತಾಸುಗಳಿಗೆ ಭಾರೀ ನಿರಾಸೆ ಆವರಿಸಿದೆ.
ವೀಕೆಂಡ್ ಮಜಾ ಮುಗಿಯುವ ಹೊತ್ತಿಗೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಲ್ಲಿ ಭಾರತ ಸೋತಿದ್ದು, ಇನ್ನೇನು ರಜಾ ಮಜಾ ಮುಗಿಸಿ ಹಾಸಿಗೆಗೆ ಜಾರಬೇಕೆನ್ನುವಷ್ಟರಲ್ಲಿ ಟೀಂ ಇಂಡಿಯಾದ ಸೋಲಿನ ಕಹಿ, ಸೋಮವಾರದ ಕಚೇರಿ ಕರ್ತವ್ಯಕ್ಕೆ ತಯಾರಾಗುತ್ತಿದ್ದ ಮನಸ್ಸುುಗಳಿಗೆ ಖೇದ ತಂದಿತು.
ಲಂಡನ್ ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 338 ರನ್ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಹಿಂದಿಕ್ಕಲು ಕ್ರೀಸ್ ಗೆ ಇಳಿದ ಭಾರತ, 30.3 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 158 ರನ್ ಮಾತ್ರ ಗಳಿಸಲು ಶಕ್ತವಾಯಿತು. ಹೀಗೆ, ಪಾಕಿಸ್ತಾನದ ವಿರುದ್ಧ 180 ರನ್ ಗಳ ಸೋಲು ಕಂಡ ರನ್ನರಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು ಭಾರತ.
ಛೇ.. ಹೀಗೆ ಫೈನಲ್ ಗೆ ಬಂದು ಸೋಲೋದಕ್ಕಿಂತ ಲೀಗ್ ಹಂತದಲ್ಲೇ ಒಮ್ಮೆ ಸೋತಿದ್ರೆ ಅದೆಷ್ಟೋ ಚೆನ್ನಾಗಿರ್ತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಬೇಸರಪಟ್ಟುಕೊಳ್ಳುವಂತಾಯಿತು.
ಈ ಪಂದ್ಯದಲ್ಲಿ ಭಾರತ ಮಾಡಿದ ತಪ್ಪುಗಳೇನು? ಪಾಕಿಸ್ತಾನದ ಮುಂದೆ ಅದು ಮಂಡಿಯೂರಿ ಕೂರುವಂತಾಗಿದ್ದು ಏಕೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತದ ಸೋಲಿಗೆ ಐದು ಕಾರಣಗಳನ್ನು ಇಲ್ಲಿ ಕೊಡಲಾಗಿದೆ.
(ಚಿತ್ರಗಳು: ಪಿಟಿಐ)

ಅಂದಿನ ಮಾತು ಇಂದೇಕೆ ಮರೆತರು ಕೊಹ್ಲಿ ?
ಇದೇ ಟೂರ್ನಿಯಲ್ಲಿ ಜೂನ್ 4ರಂದು ಪಾಕಿಸ್ತಾನದೊಂದಿಗೆ ಟೀಂ ಇಂಡಿಯಾ ಮುಖಾಮುಖಿಯಾಗಿದ್ದಾಗ, ಟಾಸ್ ಸೋತಿದ್ದ ಕೊಹ್ಲಿ, ಅನಿವಾರ್ಯವಾಗಿ ಮೊದಲು ಬ್ಯಾಟಿಂಗೆ ಗೆ ಇಳಿಯುವ ಪ್ರಮೇಯಕ್ಕೆ ಸಿಲುಕಿದ್ದರು. ಆದರೂ, ಅದಕ್ಕೊಂದು ಸಮಾಧಾನ ಉತ್ತರ ಕೊಟ್ಟಿದ್ದ ಅವರು, ''ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟ್ ಮಾಡುವ ತಂಡಕ್ಕೆ ಸಹಜವಾಗಿ ಒತ್ತಡವಿರುತ್ತದೆ. ಹಾಗಾಗಿ, ಮೊದಲು ಬ್ಯಾಟ್ ಮಾಡುವ ಅವಕಾಶ ಬಂದಿದ್ದು ಒಳ್ಳೆಯದೇ ಆಯಿತು'' ಎಂದಿದ್ದರು. ಅವರ ಮಾತು ನಿಜವಾಯಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ, ದೊಡ್ಡ ಮೊತ್ತ ಕಲೆಹಾಕಿ ಪಾಕಿಸ್ತಾನವನ್ನು ಮಣಿಸಿತ್ತು. ಆದರೆ, ಈ ಬಾರಿ ಟಾಸ್ ಗೆದ್ದರೂ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಈ ಬಾರಿ ಕೊಹ್ಲಿಗೆ ಅವರ ಮಾತು ಮರೆತು ಹೋಯಿತೇ?

ಅಗ್ರ ಕ್ರಮಾಂಕವನ್ನು ಬೇಗನೇ ಪೆವಿಲಿಯನ್ ಗೆ ಕಳುಹಿಸಬೇಕಿತ್ತು
ಪ್ರತಿ ಕ್ರಿಕೆಟ್ ಪಂದ್ಯದಲ್ಲಿ ಆರಂಭಿಕರ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಈ ಪಂದ್ಯದಲ್ಲೂ ಅಷ್ಟೆ. ಪಾಕಿಸ್ತಾನದ ಆರಂಭಿಕರಾದ ಅಜರ್ ಅಲಿ, ಫಖರ್ ಝಮಾನ್ ಜೋಡಿ ಶತಕದ ಜತೆಯಾಟ (128 ರನ್) ನೀಡಿತು. ಇಲ್ಲೇ ಆಗಿದ್ದು ಮತ್ತೊಂದು ದೊಡ್ಡ ತಪ್ಪು. ಆರಂಭಿಕರೂ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳನ್ನು ಬೇಗನೆ ಪೆವಿಲಿಯನ್ ಗೆ ಅಟ್ಟಿದ್ದರೆ ಪಾಕಿಸ್ತಾನಕ್ಕೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲವೇನೋ?

ಮಿಡಲ್ ಆರ್ಡರ್ ಕಟ್ಟಿಹಾಕದ್ದೂ ಪ್ರಮಾದ
ಆರಂಭಿಕರ ಜೋಡಿಯ ಜತೆಯಾಟವನ್ನು ಮುರಿಯುವುದು ಬೇಗನೇ ಸಾಧ್ಯವಾಗಲಿಲ್ಲವಾದರೂ, ಮಧ್ಯಮ ಕ್ರಮಾಂಕವನ್ನು ಬೇಗನೇ ಪೆವಿಲಿಯನ್ ಗೆ ಅಟ್ಟುವಲ್ಲಿ ವಿಫಲವಾಗಿದ್ದು ಭಾರತ ಮಾಡಿಕೊಂಡಿದ್ದು ಇನ್ನೊಂದು ಯಡವಟ್ಟು. ಅಜರ್ ಅಲಿಯನ್ನು ಔಟ್ ಮಾಡುವ ಮೂಲಕ ಆರಂಭಿಕ ಜೋಡಿಯನ್ನು ಮುರಿದಾದರೂ ಮೂರನೇ ಕ್ರಮಾಂಕದ ಬಾಬರ್ ಆಜಂ ಹಾಗೂ 5ನೇ ಕ್ರಮಾಂಕದ ಮೊಹಮ್ಮದ ಹಫೀಸ್ ಅವರನ್ನು ಚಿಗುರಲು ಬಿಟ್ಟಿದ್ದು ದೊಡ್ಡ ತಪ್ಪು.

ನಿರೀಕ್ಷೆಯ ಬೌಲರ್ ಗಳೇ ದುಬಾರಿಯಾದರು
ಇಷ್ಟೆಲ್ಲಾ ಹೇಳುವ ಬದಲಿಗೆ ಈ ಪಂದ್ಯದಲ್ಲಿನ ಸೋಲು ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ವೈಫಲ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ಸ್ಪಿನ್ನರ್ ಗಳ ವೈಫಲ್ಯ ಕಾಡಿತು. ಜಸ್ ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕೇದಾರ್ ಜಾಧವ್ - ಹೀಗೆ ಎಲ್ಲರೂ ದುಬಾರಿಯಾಗಿದ್ದು ವಿಪರ್ಯಾಸವೇ ಸರಿ.

ಅಗ್ರರು ಅಡಿಪಾಯ ಹಾಕದಿದ್ದು ಅಪಾಯ ತಂದಿತು
ಈಗ ಬ್ಯಾಟಿಂಗ್ ವಿಚಾರಕ್ಕೆ ಬರೋಣ. ಭಾರತ ಉತ್ತಮ ಚೇಸಿಂಗ್ ಪಡೆಯೆಂದು ಹೆಸರು ಪಡೆದಿದೆ. ಆದರೆ, ಪ್ರತಿ ಪಂದ್ಯದಲ್ಲೂ ಇದು ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಕೊಹ್ಲಿ ಅರಿಯಬೇಕಿತ್ತು. ಅದರಲ್ಲೂ ಭರವಸೆಯ ಬ್ಯಾಟ್ಸ್ ಮನ್ ಗಳಾದ ರೋಹಿತ್, ಶಿಖರ್, ಕೊಹ್ಲಿ, ಧೋನಿ.. ಇವರೆಲ್ಲರೂ ಕೇವಲ ಬೆರಳೆಣಿಕೆಯ ರನ್ ದಾಖಲಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಧೀರೋದಾತ್ತವಾಗಿ ಆಡಬಲ್ಲ ಯುವರಾಜ್ ಸಿಂಗ್ ಅಂಥವರಾದರೂ ಏನು ಮಾಡಲಾದೀತು?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications