
ಕಳೆದ ಡಿಸೆಂಬರ್ 30ರಂದು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ರಿಷಭ್ ಪಂತ್ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಕನಿಷ್ಠ ಒಂದು ವರ್ಷದವರೆಗೆ ಕ್ರಿಕೆಟ್ ಆಡದಿಂದ ದೂರವುಳಿಯಲಿದ್ದಾರೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿಯೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಹೊತ್ತಿಗೆ ಚೇತರಿಸಿಕೊಂಡರೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅಷ್ಟರೊಳಗೆ ಗಾಯದಿಂದ ಗುಣಮುಖರಾಗಿ ಫಿಟ್ನೆಸ್ ಸಾಬೀತುಪಡಿಸಬೇಕಿದೆ.
ಇದೇ ವೇಳೆ, ಗುರುವಾರ, ಮಾರ್ಚ್ 16ರಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಕಾರು ಅಪಘಾತದ ನಂತರ ಮೊದಲ ಬಾರಿಗೆ ರಿಷಭ್ ಪಂತ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಂತರ, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಿಷಭ್ ಪಂತ್ ಭೇಟಿಯ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಯುವರಾಜ್ ಸಿಂಗ್ ಅವರು ಫೋಟೋಗೆ ಶೀರ್ಷಿಕೆ ನೀಡಿದ್ದು, "ಮಗುವಿನ ಹೆಜ್ಜೆ ಹಾಕುತ್ತಿದ್ದಾನೆ!!! ಈ ಚಾಂಪಿಯನ್ ಮತ್ತೆ ಪುಟಿದೇಳಲಿದ್ದಾರೆ. ಅವರ ಮುಖದಲ್ಲಿ ನಗು ಮೂಡಿದೆ. ಈತ ಧನಾತ್ಮಕವಾಗಿದ್ದಾನೆ ಮತ್ತು ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ. ನಿಮಗೆ ಹೆಚ್ಚಿನ ಶಕ್ತಿ ಲಭಿಸಲಿ," ಎಂದು ಬರೆದುಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಈ ಸ್ಫೂರ್ತಿಯುತ ಮಾತುಗಳು ಖಂಡಿತವಾಗಿಯೂ ರಿಷಭ್ ಪಂತ್ ಅವರ ಉತ್ಸಾಹವನ್ನು ಹೆಚ್ಚಿಸಲಿವೆ. ಇನ್ನು ರಾಷ್ಟ್ರೀಯ ತಂಡದಿಂದ ಇನ್ನೂ ಯಾವುದೇ ಕ್ರಿಕೆಟಿಗರು ಭೇಟಿಯಾಗಿಲ್ಲ. ಅವರೆಲ್ಲರೂ ನಿರಂತರವಾಗಿ ಕ್ರಿಕೆಟ್ನಲ್ಲಿ ಕಾರ್ಯನಿರತರಾಗಿದ್ದಾರೆ.
25 ವರ್ಷದ ರಿಷಭ್ ಪಂತ್ ಒಂದು ದಿನದ ಹಿಂದೆ ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆಯುವ ಅಭ್ಯಾಸ ಮಾಡಿದರು. ಸದೃಢ ದೇಹ ಹೊಂದಲು ಜಲನಡಿಗೆ ವ್ಯಾಯಾಮವೂ ಒಂದು ಎಂದು ತೋರುತ್ತದೆ. ಇದೇ ವೇಳೆ, ಯುವರಾಜ್ ಸಿಂಗ್ ಅವರ ಭೇಟಿಯು ರಿಷಭ್ ಪಂತ್ಗೆ ಬೇಗ ಗುಣಮುಖರಾಗಲು ಉತ್ಸಾಹ ನೀಡುತ್ತದೆ. ಒಂದು ದಶಕದ ಹಿಂದೆ ಸ್ವತಃ ಯುವರಾಜ್ ಸಿಂಗ್ ಅವರು ಶ್ವಾಸಕೋಶದ ಕ್ಯಾನ್ಸರ್ನೊಂದಿಗೆ ಹೋರಾಡಿ ಕಠಿಣ ಸಮಯವನ್ನು ಎದುರಿಸಿದ್ದಾರೆ.
ಯುವರಾಜ್ ಸಿಂಗ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವಾಗಲೇ ಕ್ಯಾನ್ಸರ್ಗೆ ತುತ್ತಾಗಿ ವೃತ್ತಿಜೀವನದ ಅಮೂಲ್ಯ ಸಮಯವನ್ನು ಕಳೆದುಕೊಂಡರು. ಆದರೆ ಯುವರಾಜ್ ಸಿಂಗ್ ಮೈದಾನಕ್ಕೆ ಶೀಘ್ರವಾಗಿ ಪುನರಾಗಮನ ಮಾಡಿ 2018ರವರೆಗೆ ಭಾರತ ತಂಡಕ್ಕಾಗಿ ಆಡಿದರು. 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ನೊಂದಿಗೆ ಐಪಿಎಲ್ ಪ್ರಶಸ್ತಿ ಗೆದ್ದಾಗ ತಂಡದ ಸದಸ್ಯರಾಗಿದ್ದರು.
ಇನ್ನು ರಿಷಭ್ ಪಂತ್ ಅವರು ಭಾರತ ತಂಡಕ್ಕೆ ಯಾವಾಗ ಮರಳಲಿದ್ದಾರೆ ಎಂಬುದರ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ದಿನಾಂಕವನ್ನು ತಿಳಿಸಿಲ್ಲ. ರಿಷಭ್ ಪಂತ್ ನಡೆಯಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದಾರೆ. ಹೀಗಾಗಿ ಅವರು ಗುಣಮುಖರಾಗಲು ಕೆಲವು ತಿಂಗಳುಗಳ ಸಮಯದ ಅವಶ್ಯಕತೆ ಇದೆ.
ರಿಷಭ್ ಪಂತ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಾವಳಿಯನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕನ ಸ್ಥಾನಕ್ಕೆ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಲಾಗಿದ್ದರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ನೇಮಕವಾಗಿದ್ದಾರೆ.