ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಕಳೆದ ವರ್ಷದ ಸಪ್ಟೆಂಬರ್ ತಿಂಗಳ ಬಳಿಕ ಗಾಯದ ಕಾರಣದಿಂದಾಗಿ ಕ್ರಿಕೆಟ್ನಿಂದ ದೂರವಿದ್ದಾರೆ. 2022ರ ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೇರಿದಂತೆ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಬೂಮ್ರಾ ಸೇವೆಯಿಂದ ವಂಚಿತವಾಗಿದೆ.
ಆದರೆ ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಲಿದ್ದು ಆ ಟೂರ್ನಿಗೂ ಮುನ್ನ ಬೂಮ್ರಾ ಸಂಪೂರ್ಣವಾಗಿ ಫಿಟ್ ಆಗಬೇಕು ಎಂಬುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರೀಕ್ಷೆ. ಬಹುತೇಕ ಫಿಟ್ ಆಗಿರುವ ಬೂಮ್ರಾ ಅವರನ್ನು ಮುಂದಿನ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ತಂಡಕ್ಕೆ ಕಮ್ಬ್ಯಾಕ್ ಮಾಡಿಸುವುದು ಬಿಸಿಸಿಐನ ಯೋಜನೆಯಾಗಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಬೂಮ್ರಾ ವಿಚಾರವಾಗಿ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ದಿ ವೀಕ್ಗೆ ನಿಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಕೋಚ್ ರವಿ ಶಾಸ್ತ್ರಿ ಏಕದಿನ ವಿಶ್ವಕಪ್ಗೂ ಮುನ್ನ ಬೂಮ್ರಾ ಆಡಲು ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಆತುರವಾಗಿ ಬೂಮ್ರಾ ಅವರನ್ನು ಆಡಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ಜಸ್ಪ್ರೀತ್ ಬೂಮ್ರಾ ಬಹಳ ಮುಖ್ಯವಾದ ಕ್ರಿಕೆಟಿಗ. ಆತನನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದಿದ್ದಾರೆ ರವಿ ಶಾಸ್ತ್ರಿ.
"ಬೂಮ್ರಾ ಬಹಳ ಮುಖ್ಯವಾದ ಕ್ರಿಕೆಟಿಗ. ಆದರೆ ವಿಶ್ವಕಪ್ನ ಹಿನ್ನೆಲೆಯಲ್ಲಿ ನೀವು ಆತುರಪಟ್ಟರೆ ನೀವು ಮತ್ತೆ ನಾಲ್ಕು ತಿಂಗಳ ಕಾಲ ಅವರನ್ನು ಕಳೆದುಕೊಳ್ಳಬಹುದಾಗಬಹುದು. ಶಾಹಿನ್ ಅಫ್ರಿದಿ ಆದಂತೆಯೇ ಆಗಬಹುದು. ಇದು ಅತ್ಯಂತ ಸೂಕ್ಷ್ಮವಾದ ವಿಚಾರ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ.
ಬುಮ್ರಾ ಸೆಪ್ಟೆಂಬರ್ 2022 ಕ್ರಿಕೆಟ್ ಮೈದಾನದಿಂದ ದೂರವುಳಿದಿದ್ದಾರೆ. 2022ರ ಟಿ20 ವಿಶ್ವಕಪ್ಗೆ ಮುನ್ನ ಪೂರ್ಣ ಫಿಟ್ನೆಸ್ಗೆ ಮರಳಲು ಸಾಕಷ್ಟು ಪ್ರಯತ್ನಗಳು ನಡೆಯಿತಾದರೂ ಅದು ವಿಫಲವಾಯಿತು. ನಂತರ ನ್ಯೂಜಿಲೆಂಡ್ನಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾದ ಬೂಮ್ರಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ರ ಫೈನಲ್ ಪಂದ್ಯದಿಂದಲೂ ಹೊರಗುಳಿದರು. ಇದೀಗ ಬಹುತೇಕ ಫಿಟ್ನೆಸ್ ಕಂಡುಕೊಂಡಿರುವ ಬೂಮ್ರಾ ಟೀಮ್ ಇಂಡಿಯಾಗೆ ಮರಳಲು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.