ಐಪಿಎಲ್ ಮಾಜಿ ಆಟಗಾರ ರಾಜಗೋಪಾಲ್ ಸತೀಶ್ಗೆ ಅನಾಮಿಕನೊಬ್ಬ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ 40 ಲಕ್ಷ ರೂಪಾಯಿ ಆಫರ್ ನೀಡದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತು ಈಗಾಗಲೇ ದೂರು ದಾಖಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ತಂಡದಲ್ಲಿ ಪ್ರತಿನಿಧಿಸಿದ್ದ ರಾಜಗೋಪಾಲ್, ರಣಜಿ ಟ್ರೋಫಿಯಲ್ಲೂ ಆಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕುರಿತಾಗಿ ಆಫರ್ ಕೊಟ್ಟಿದ್ದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್ (TNPL) ನಲ್ಲೂ ಆಡಿರುವ ರಾಜಗೋಪಾಲ್ ಸತೀಶ್ ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ , ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.
ರಾಜಗೋಪಾಲ್ ಸತೀಶ್ ಅವರು ಬಿಸಿಸಿಐ ಮತ್ತು ಐಸಿಸಿಯನ್ನು ಈ ಹಿಂದೆ ಸಂಪರ್ಕಿಸಿದ್ದಾರೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕದ (ಎಸಿಎಸ್ಯು) ಮುಖ್ಯಸ್ಥ ಶಬ್ಬೀರ್ ಖಂಡ್ವಾವಾಲಾ ಬಹಿರಂಗಪಡಿಸಿದ್ದಾರೆ. ಪೊಲೀಸರು ಈ ಸಂಪೂರ್ಣ ಪ್ರಕರಣದ ವಿವರಗಳನ್ನು ಗಮನಿಸಿದ್ದಾರೆ ಮತ್ತು ಶೀಘ್ರದಲ್ಲೇ ತನಿಖೆ ನಡೆಸಲಾಗುವುದು ಎಂದಿದ್ದಾರೆ.
"ಆಟಗಾರನು ನಮ್ಮನ್ನು ಮತ್ತು ಐಸಿಸಿಯನ್ನು ಸಂಪರ್ಕಿಸಿದ್ದಾನೆ. ಇನ್ಸ್ಟಾಗ್ರಾಮ್ನಲ್ಲಿ ಯಾರೋ ಅವರನ್ನು ಸಂಪರ್ಕಿಸಿದ್ದಾರೆ ಎಂದು ನಮಗೆ ತಿಳಿಸಿದರು. ನಾವು ಪ್ರಕರಣದ ವಿವರಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಈ ವಿಷಯದಲ್ಲಿ ಪೊಲೀಸ್ ದೂರು ದಾಖಲಿಸಲು ನಮ್ಮ ಎಸಿಯು ಅಧಿಕಾರಿಗೆ ತಿಳಿಸಿದ್ದೇವೆ. ನಾವು ಕೇವಲ ಫೆಸಿಲಿಟೇಟರ್ , ಉಳಿದ ವಿಚಾರವನ್ನ ಪೊಲೀಸರು ನೋಡಿಕೊಳ್ಳುತ್ತಾರೆ'' ಎಂದು ಖಂಡ್ವಾವಾಲಾ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ರಾಜಗೋಪಾಲ್ ಪೊಲೀಸ್ ದೂರಿನ ಪ್ರಕಾರ ಬನ್ನಿ ಆನಂದ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಮ್ನಲ್ಲಿ 40 ಲಕ್ಷ ರೂಪಾಯಿ ಆಫರ್ನೊಂದಿಗೆ ಸತೀಶ್ ಅವರನ್ನು ಸಂಪರ್ಕಿಸಿದ್ದರು . ಈಗಾಗಲೇ ಇತರ ಇಬ್ಬರು ಆಟಗಾರರು ಸಹ ಇದಕ್ಕೆ ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾನೆ. ಆದ್ರೆ ಸತೀಶ್ ನಯವಾಗಿ ಆಫರ್ ತಿರಸ್ಕರಿಸಿದ್ದಾರೆ.
"ಜನವರಿ 3 ರಂದು, ಬನ್ನಿ ಆನಂದ್ ಎಂಬ ವ್ಯಕ್ತಿ ಸತೀಶ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕಿಸಿ, 40 ಲಕ್ಷ ರೂಪಾಯಿ ಪಾವತಿಸುವ ಆಮಿಷ ಒಡ್ಡಿ ಸಂದೇಶವನ್ನು ಕಳುಹಿಸಿದ್ದಾರೆ ಮತ್ತು ಇಬ್ಬರು ಆಟಗಾರರು ಈಗಾಗಲೇ ಆಫರ್ಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದನು. ಸತೀಶ್ ಅವರ ಆಫರ್ಗೆ 'ಕ್ಷಮಿಸಿ' ಎಂದು ಉತ್ತರಿಸಿದ್ದಾರೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದ್ರೆ ವಿಚಿತ್ರ ಎಂದ್ರೆ ರಾಜಗೋಪಾಲ್ ಸತೀಶ್ ಕೊನೆಯಬಾರಿಗೆ ಐಪಿಎಲ್ ಆಡಿದ್ದು 2016ರಲ್ಲಿ. ಐಪಿಎಲ್ನಲ್ಲಿ 34 ಪಂದ್ಯ ಆಡಿರುವ ಸತೀಶ್ಗೆ ಈಗ ಏಕೆ ಆಫರ್ ಬಂದಿದೆ ಎಂಬುದು ಆಶ್ಚರ್ಯ ಮೂಡಿಸಿದೆ.