ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಅವರು ಮೈಸೂರು ವಾರಿಯರ್ಸ್ ಪರ ಅದ್ಭುತ ಪ್ರರ್ದಶನ ನೀಡುತ್ತಿದ್ದಾರೆ.
ಈಗ ಸಮಿತ್ ದ್ರಾವಿಡ್ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ 2026ರ ಅಂಡರ್-19 ವಿಶ್ವಕಪ್ನಲ್ಲಿ ಆಡುವ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.

ಬಲಗೈ ಬ್ಯಾಟರ್ ಆಗಿರುವ ಸಮಿತ್ ದ್ರಾವಿಡ್ ಮಧ್ಯಮ ವೇಗದ ಬೌಲಿಂಗ್ ಅನ್ನು ಸಹ ಮಾಡುತ್ತಾರೆ. ಪ್ರಸ್ತುತ ಮಹಾರಾಜ ಟ್ರೋಫಿಯಲ್ಲಿ ಅಪ್ಪನಂತೆ ಕ್ಲಾಸಿಕ್ ಆಗಿ ಬ್ಯಾಟ್ ಬೀಸುತ್ತಿರುವ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಭಾರತ ಪರ ಅಂಡರ್-19 ವಿಶ್ವಕಪ್ ಆಡುತ್ತಾರಾ ಎಂಬ ಪ್ರಶ್ನೆಗಳು ಎದುರಾಗಿವೆ.
ಸಮಿತ್ ದ್ರಾವಿಡ್ 10 ನವೆಂಬರ್ 2005 ರಂದು ಜನಿಸಿದ್ದು, ಇನ್ನೆರಡು ತಿಂಗಳಲ್ಲಿ ತಮ್ಮ 19ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಮುಂದಿನ ಅಂಡರ್-19 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. 2026ರ ಅಂಡರ್-19 ವಿಶ್ವಕಪ್ ವೇಳೆಗೆ ಅವರಿಗೆ 20 ವರ್ಷಕ್ಕೂ ಹೆಚ್ಚು ವಯಸ್ಸಾಗಲಿದೆ. ಈ ಕಾರಣದಿಂದ ಸಮಿತ್ ದ್ರಾವಿಡ್ 2026ರ ಅಂಡರ್-19 ವಿಶ್ವಕಪ್ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಆಸ್ಟ್ರೇಲಿಯಾ ವಿರುದ್ಧ ಅಂಡರ್-19 ಸರಣಿಯೂ ಸೆಪ್ಟೆಂಬರ್ 21 ರಿಂದ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಪುದುಚೇರಿಯಲ್ಲಿ ಸೆಪ್ಟೆಂಬರ್ 21, 23 ಮತ್ತು 26 ರಂದು ನಡೆಯಲಿದ್ದು, ಭಾರತ ತಂಡವನ್ನು ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದಾರೆ.
ಇದಾದ ನಂತರ ಚೆನ್ನೈನಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 30 ರಿಂದ ಆರಂಭವಾಗಲಿದ್ದು, ಎರಡನೇ ಪಂದ್ಯ ಅಕ್ಟೋಬರ್ 7 ರಿಂದ ಶುರುವಾಗಲಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವವನ್ನು ಮಧ್ಯಪ್ರದೇಶದ ಸೋಹಮ್ ಪಟವರ್ಧನ್ ವಹಿಸಲಿದ್ದಾರೆ.
ಮಹಾರಾಜ ಟ್ರೋಫಿಯಲ್ಲಿ ಸಮಿತ್ ದ್ರಾವಿಡ್ ಇನ್ನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅವರು 7 ಇನ್ನಿಂಗ್ಸ್ಗಳಲ್ಲಿ 82 ರನ್ ಗಳಿಸಿದ್ದು, ಗರಿಷ್ಠ ಸ್ಕೋರ್ 33. ಅಲ್ಲದೆ, ಅವರಿಗೆ ಟೂರ್ನಿಯಲ್ಲಿ ಬೌಲಿಂಗ್ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ.
ಸಮಿತ್ ದ್ರಾವಿಡ್ ಈ ವರ್ಷದ ಆರಂಭದಲ್ಲಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕರ್ನಾಟಕವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ 8 ಪಂದ್ಯಗಳಲ್ಲಿ 362 ರನ್ ಗಳಿಸಿದ್ದರು.
ಜಮ್ಮು ಮತ್ತು ಕಾಶ್ಮೀರ ವಿರುದ್ಧ 98 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದರು. ಇದಲ್ಲದೇ ಟೂರ್ನಿಯಲ್ಲಿ 16 ವಿಕೆಟ್ ಕಬಳಿಸಿದ್ದರು. ಇದರಲ್ಲಿ ಮುಂಬೈ ವಿರುದ್ಧದ ಫೈನಲ್ನಲ್ಲಿ ಪಡೆದ ಎರಡು ವಿಕೆಟ್ಗಳೂ ಪ್ರಮುಖವಾಗಿವೆ.