
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಬಗೆಗಿನ ಗೊಂದಲಗಳು ಮುಂದಿವರಿದಿದೆ. ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲು ಭಾರತ ಬ್ರಿಸ್ಬೇನ್ಗೆ ತೆರಖುವುದಿಲ್ಲ ಎಂಬ ವರದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೆಯ ನಿರೀಕ್ಷೆಯಲ್ಲಿದೆ.
ಈ ಮಧ್ಯೆ ಬುಧವಾರ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಗೆ ಪತ್ರವನ್ನು ಬರೆದಿದ್ದು ಬ್ರಿಸ್ಬೆನ್ಗೆ ಟೀಮ್ ಇಂಡಿಯಾ ತೆರಳಲು ಬಯಸುತ್ತಿಲ್ಲ ಎಂದು ತಿಳಿಸಿದೆ ಎಂಬುದಾಗಿ ಖಚಿತಪಡಿಸದ ಮೂಲಗಳಿಂದ ಮಾಹಿತಿಗಳು ಲಭ್ಯವಾಗುತ್ತಿದೆ. ಹೀಗಾಗಿ ಬ್ರಿಸ್ಬೇನ್ ಟೆಸ್ಟ್ನ ಬಗ್ಗೆ ಅನುಮಾನಗಳು ಮೂಡುವಂತೆ ಮಾಡಿದೆ.
ಬ್ರಿಸ್ಬೇನ್ನಲ್ಲಿನ ಕಠಿಣ ಕ್ವಾರಂಟೈನ್ ನಿಯಮಗಳ ಕಾರಣದಿಂದಾಗಿ ಭಾರತೀಯ ಕ್ರಿಕೆಟಿಗರು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲ.
ಫಾಕ್ಸ್ ಕ್ರಿಕೆಟ್ ವರದಿ ಮಾಡಿರುವ ಪ್ರಕಾರ ಡಿಸೆಂಬರ್ 29ರ ನಂತರ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಯಾವುದೇ ರೀತಿಯ ಸಂವಹನ ನಡೆದಿಲ್ಲ ಎಂದು ಹೇಳಲಾಗಿದೆ. ಈ ವಿಚಾರವಾಗಿ ಬುಧವಾರ ಟೀಮ ್ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯಿಸುತ್ತಾ ಈ ನಿರ್ಧಾರಗಳನ್ನು ಮಂಡಳಿಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಆಟಗಾರರಲ್ಲ ಎಂದಿದ್ದರು.
"ನಾವು ಆಟಗಾರರು, ನಾವು ಟೆಸ್ಟ್ ಪಂದ್ಯಗಳ ಕಡೆಗೆ ಮಾತ್ರವೇ ಚಿತ್ತ ಹರಿಸುತ್ತೇವೆ. ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಅಟಗಾರರಾಗಿ ನಾವು ಅಂಗಳದಲ್ಲಿ ನಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಲು ಬಯಸುತ್ತೇವೆ " ಎಂದು ಅಜಿಂಕ್ಯ ರಹಾನೆ ಪ್ರತಿಕ್ರಿಯೆ ನೀಡಿದ್ದರು.